ಬೆಂಗಳೂರು: ಹೆಬ್ಬಾಳ ಬಳಿಯ ನ್ಯೂ ಬಿಇಎಲ್ ವೃತ್ತ ಸಮೀಪದಲ್ಲಿ ಕಾರೊಂದು ಉರುಳಿಬಿದ್ದು ಬೆಂಕಿಗೆ ಆಹುತಿಯಾಗಿದ್ದು,ಜಾಲಹಳ್ಳಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಐವರು ಪ್ರಯಾಣಿಕರಿದ್ದ ಹೋಂಡಾ ಕಾರು, ರಸ್ತೆ ವಿಭಜಕಕ್ಕೆ ಗುದ್ದಿ ಉರುಳಿಬಿದ್ದಿತ್ತು. ಕೆಲ ಕ್ಷಣಗಳಲ್ಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಬರಲಾರಂಭಿಸಿತ್ತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
‘ರಕ್ಷಣೆಗೆ ಬಂದ ಜನ, ಕಾರಿನಲ್ಲಿದ್ದವರನ್ನು ಹೊರಗೆ ಎಳೆದು ರಕ್ಷಿಸಿದರು. ನಂತರ, ಇಡೀ ಕಾರು ಬೆಂಕಿಯಿಂದ ಹೊತ್ತಿ ಉರಿಯಲಾರಂಭಿಸಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಅಷ್ಟರಲ್ಲೇ ಕಾರು ಸುಟ್ಟಿತ್ತು’ ಎಂದರು.
ಜಾಲಹಳ್ಳಿ ಪೊಲೀಸರು, ‘ಕರ್ಫ್ಯೂ ವೇಳೆಯಲ್ಲೇ ಐವರು ಹೊರಗೆ ಬಂದಿದ್ದಾರೆ. ಚಾಲಕ ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿರುವ ಅನುಮಾನವಿದೆ’ ಎಂದರು.