ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿನ್ನ ಮಾರಾಟ ನೆಪ: ₹60 ಲಕ್ಷ ಸುಲಿಗೆ

ಪಾನ್‌ ಬ್ರೋಕರ್‌ಗೆ ಮಚ್ಚಿನಿಂದ ಹಲ್ಲೆ: ಆರೋಪಿಗಳಿಂದ ₹53 ಲಕ್ಷ ಜಪ್ತಿ
Published 20 ಡಿಸೆಂಬರ್ 2023, 14:13 IST
Last Updated 20 ಡಿಸೆಂಬರ್ 2023, 14:13 IST
ಅಕ್ಷರ ಗಾತ್ರ

ಬೆಂಗಳೂರು: ಪಾನ್‌ ಬ್ರೋಕರ್‌ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆ ನಡೆಸಿ, ₹60 ಲಕ್ಷ ಕಸಿದು ಪರಾರಿಯಾಗಿದ್ದ ಐವರು ಆರೋಪಿಗಳನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.‌

ಕುರುಬರಹಳ್ಳಿಯ ನಿವಾಸಿ ಮಹಮ್ಮದ್‌ ರಿಜ್ವಾನ್‌, ಇಂದಿರಾನಗರದ ಅಶ್ರಫ್‌, ದಿವಾಕರ್‌, ಮಹಮ್ಮದ್‌ ಇರ್ಫಾನ್‌ ಹಾಗೂ ಸತೀಶ್‌ ಬಂಧಿತ ಆರೋಪಿಗಳು.‌

‘ಬಂಧಿತ ಆರೋಪಿಗಳಿಂದ ₹53 ಲಕ್ಷ ನಗದು, ಒಂದು ಕಾರು ಹಾಗೂ ಬೈಕ್‌ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ನಂಬಿಸಿ ನಗರದ ಆದರ್ಶ್‌ ಲೇಔಟ್‌ನ ಹಳೇ ರಿಜಿಸ್ಟಾರ್‌ ಕಚೇರಿ ರಸ್ತೆಯ ಸಿದ್ದಪ್ಪಾಜಿ ಉದ್ಯಾನದ ಬಳಿಗೆ ಸಂಕೇತ್ ಬಿನ್‌ ದಿನೇಶ್‌ಕುಮಾರ್‌ ಎಂಬುವರನ್ನು ಆರೋಪಿಗಳು ಕರೆಸಿಕೊಂಡಿದ್ದರು. ಸಂಕೇತ್‌ ಅವರು ಕೋಲಾರ ಜಿಲ್ಲೆಯ ಕೆಜಿಎಫ್‌ನ ಜೈನ್‌ ಟೆಂಪಲ್‌ ರಸ್ತೆಯಲ್ಲಿ ಪಾನ್‌ ಬ್ರೋಕರ್‌ ಕೆಲಸ ಮಾಡುತ್ತಿದ್ದರು. ಕಡಿಮೆ ಬೆಲೆಗೆ ಚಿನ್ನ ಸಿಗುವ ಆಸೆಯಿಂದ ಕೆಜಿಎಫ್‌ನಿಂದ ₹60 ಲಕ್ಷ ಹಣದ ಜೊತೆಗೆ ನಗರಕ್ಕೆ ಬಂದಿದ್ದರು. ಆಗ ಸ್ಥಳಕ್ಕೆ ಬಂದಿದ್ದ ಆರೋಪಿಗಳು ಅನುಮಾನ ಬಾರದಂತೆ ಮಾತುಕತೆ ನಡೆಸಿದ್ದರು. ಅದಾದ ಮೇಲೆ ಹಲ್ಲೆ ನಡೆಸಿದ್ದರು’ ಎಂದು ಪೊಲೀಸರು ಹೇಳಿದರು.

‘ಕಾರಿನಲ್ಲಿ ತಂದಿದ್ದ ಮಚ್ಚಿನಿಂದ ಹಲ್ಲೆ ನಡೆಸಿದ್ದ ಆರೋಪಿಗಳು ಹಣವನ್ನು ಕಸಿದು ಪರಾರಿಯಾಗಿದ್ದರು. ಆರೋಪಿಗಳು ಹಣವನ್ನು ಹಂಚಿಕೊಂಡಿದ್ದರು. ಮಹಮ್ಮದ್ ಬಳಿಯಿದ್ದ ₹50 ಲಕ್ಷ ಹಾಗೂ ಉಳಿದ ಆರೋಪಿಗಳ ಬಳಿಯಿದ್ದ ₹3 ಲಕ್ಷವನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT