ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬದುಕು ಗಟ್ಟಿಮಾಡಿ ಹೋರಾಟಕ್ಕೆ ಬಂದವರು ಗಾಂಧಿ, ನೆಹರೂ: ಸಾಹಿತಿ ಜಿ.ಬಿ. ಹರೀಶ

Published 26 ಮೇ 2024, 15:44 IST
Last Updated 26 ಮೇ 2024, 15:44 IST
ಅಕ್ಷರ ಗಾತ್ರ

ಬೆಂಗಳೂರು: ‘ಗಾಂಧಿ, ನೆಹರೂ ಮತ್ತಿತರ ನಾಯಕರು ವೈಯಕ್ತಿಕ ಜೀವನ್ನವನ್ನು ಭದ್ರಮಾಡಿಕೊಂಡು, ನಂತರ ದೇಶ ಸೇವೆಗಾಗಿ ಬಂದಿದ್ದರು. ಆದರೆ, ಸಾವರ್ಕರ್‌ ತರಹದವರು ವೈಯಕ್ತಿಕ ಜೀವನವನ್ನೇ ದೇಶಕ್ಕಾಗಿ ತ್ಯಾಗ ಮಾಡಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು’ ಎಂದು ಸಾಹಿತಿ ಜಿ.ಬಿ.ಹರೀಶ ಹೇಳಿದರು. 

ಸಾವರ್ಕರ್‌ ಸಾಹಿತ್ಯ ಸಂಘ ಭಾನುವಾರ ದಿ ಮಿಥಿಕ್‌ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದ ‘ಸಾವರ್ಕರ್‌ ಸಮಗ್ರ ಸಂಪುಟ–1’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಾಂಧೀಜಿ 50ನೇ ವರ್ಷದವರೆಗೆ ಸ್ವಾತಂತ್ರ್ಯ ಹೋರಾಟಕ್ಕೆ ಬರಲಿಲ್ಲ. ನೆಹರೂ ಬಂದಿರಲಿಲ್ಲ, ಅವರ ತಂದೆಯೂ ಬಂದಿರಲಿಲ್ಲ. ವಿದ್ಯಾಭ್ಯಾಸ ಮಾಡಿ, ಲೌಕಿಕವಾದ, ಭೌತಿಕವಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡು ಜೀವನ ಭದ್ರವಾದ ಮೇಲೆ ಸಮಾಜ ಸೇವೆಗಾಗಿ ಬಂದರು. ದಾದಾಬಾಯಿ ನವರೋಜಿ, ನ್ಯಾ. ರಾನಡೆ, ಫಿರೋಜ್‌ ಶಾ ಸಹಿತ ಕಾಂಗ್ರೆಸ್‌ನ ಆಗಿನ ಬಹುತೇಕ ಹೊರಾಟಗಾರರು ಇದೇ ರೀತಿಯವರು ಎಂದು ಹೇಳಿದರು.

ಹೆಡ್ಗೇವಾರ್‌, ಮೂಂಜೆ, ವಿನಾಯಕ ಸಾವರ್ಕರ್‌, ಗಣೇಶ್‌ ಸಾವರ್ಕರ್‌, ಚಾಪೆಕರ್ ಬಂಧುಗಳು, ಖುದಿರಾಂ ಬೋಸ್‌, ಭಗತ್‌ ಸಿಂಗ್‌ನಂಥವರು ಮೀನ ಮೇಷ ಎಣಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಬಂದವರಲ್ಲ. ಲೆಕ್ಕಾಚಾರಗಳಿಲ್ಲದೇ ಬಂದವರು ಎಂದು ತಿಳಿಸಿದರು.

ರಂಗಕರ್ಮಿ ಎಸ್‌.ಎನ್‌. ಸೇತುರಾಂ ಮಾತನಾಡಿ, ‘ಅಹಿಂಸೆಯಿಂದ ನಮಗೆ ಸ್ವಾತಂತ್ರ್ಯ ಬಂತು ಎಂಬ ಭ್ರಮೆಯನ್ನು ಬಿತ್ತಲಾಗಿದೆ. ಅಹಿಂಸೆಯಿಂದ ಬ್ರಿಟಿಷರು ಸತ್ತಿಲ್ಲ. ನಮ್ಮವರು ಸತ್ತಿದ್ದಾರೆ. ಕ್ರಾಂತಿಕಾರಿಗಳು ಹೋರಾಟ ಮಾಡಿ ಪ್ರಾಣ ಕಳೆದುಕೊಂಡರೆ, ಹೋರಾಟಗಾರರಲ್ಲದ ಸಾಮಾನ್ಯ ಜನರು ಬ್ರಿಟಿಷರ ಕೆಟ್ಟ ಆಡಳಿತದಲ್ಲಿ ಹಸಿವಿನಿಂದ, ಬರಗಾಲದಿಂದ, ಪ್ಲೇಗ್‌ನಂಥ ರೋಗಗಳಿಂದ ಸತ್ತರು. ಎರಡನೇ ಮಹಾಯುದ್ಧದ ನಂತರ ಶಸ್ತ್ರದ ಹೆದರಿಕೆಯಿಂದಾಗಿಯೇ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದರೇ ಹೊರತು ಅಹಿಂಸೆಯಿಂದಲ್ಲ’ ಎಂದು ಪ್ರತಿಪಾದಿಸಿದರು.

ದಿ ಮಿಥಿಕಲ್‌ ಸೊಸೈಟಿ ಅಧ್ಯಕ್ಷ ವಿ. ನಾಗರಾಜ್‌, ಬರಹಗಾರ್ತಿ ಎಸ್‌.ಆರ್. ಲೀಲಾ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT