ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ–ಗಣೇಶ ಹಬ್ಬ: ತರಕಾರಿ -ಹೂವು ದರ ಕಡಿಮೆ, ಖರೀದಿ ಜೋರು

Published 16 ಸೆಪ್ಟೆಂಬರ್ 2023, 16:28 IST
Last Updated 16 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಗೌರಿ, ಗಣೇಶ ಹಬ್ಬವನ್ನು ಸಂಭ್ರಮ–ಸಡಗರದಿಂದ ಆಚರಿಸಲು ನಗರದ ಜನತೆ ಸಜ್ಜಾಗುತ್ತಿದ್ದು, ಹಬ್ಬಕ್ಕೆ ಬೇಕಾದ ವಿಗ್ರಹ, ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಶನಿವಾರ ಜೋರಾಗಿತ್ತು.

ವರಮಹಾಲಕ್ಷ್ಮಿ ಹಬ್ಬದಲ್ಲಿ ಗಗನಕ್ಕೇರಿದ್ದ ಹೂವು  ಹಣ್ಣು–ಹಂಪಲು ಸೇರಿ ಅಗತ್ಯ ವಸ್ತುಗಳ ಬೆಲೆ ಈಗ ಇಳಿದಿದೆ. ಆದರೆ, ಆ ಪ್ರಮಾಣದ ಗ್ರಾಹಕರು ಮಾರುಕಟ್ಟೆಗಳಲ್ಲಿ ಈ ಬಾರಿ ಕಂಡುಬರಲಿಲ್ಲ. ಗೌರಿ–ಗಣೇಶ ಹಬ್ಬಕ್ಕೆ ತರಕಾರಿ, ಹಣ್ಣು, ಹೂವಿನ ದರಗಳ ಸಾಕಷ್ಟು ಕಡಿಮೆಯಾಗಿದೆ.

ಕೆ.ಆರ್‌.ಮಾರುಕಟ್ಟೆಯಲ್ಲಿ ಬೆಳಗಿನ ಜಾವದ ವೇಳೆಗೇ ಜನ ಜಮಾಯಿಸಿದ್ದರು. ಚಿಕ್ಕಪೇಟೆಯ ಅವೆನ್ಯೂ ರಸ್ತೆ ಮತ್ತು ಸುತ್ತಮುತ್ತಲ ರಸ್ತೆಗಳಲ್ಲಿ ಜನದಟ್ಟಣೆ ಹೆಚ್ಚಿತ್ತು.

‘ಬಟಾಣಿ ಪ್ರತಿ ಕೆ.ಜಿಗೆ ₹100ರಂತೆ ಮಾರಾಟವಾಗುತ್ತಿದೆ. ಶತಕ ಬಾರಿಸಿದ್ದ ಟೊಮೆಟೊ ಕೆ.ಜಿ ₹15,  ಈರುಳ್ಳಿ ₹ 30, ಹಸಿಮೆಣಸಿನಕಾಯಿ ₹80ರಂತೆ ಮಾರಾಟವಾಗುತ್ತಿವೆ. ಅದನ್ನು ಬಿಟ್ಟು ಬಹುತೇಕ ತರಕಾರಿ ದರಗಳ ಕಡಿಮೆಯಾಗಿದೆ. ಮಾರುಕಟ್ಟೆಗೆ ತರಕಾರಿ ಪೂರೈಕೆ ಹೆಚ್ಚಿದ್ದು, ಬೇಡಿಕೆ ಕಡಿಮೆ ಇದೆ. ಆದ್ದರಿಂದ ಬೆಲೆಗಳಲ್ಲಿ ಇಳಿಕೆಯಾಗಿದೆ’ ಎಂದು ಕೆ.ಆರ್. ಮಾರುಕಟ್ಟೆಯ ತರಕಾರಿ ವ್ಯಾಪಾರಿ ಅಕ್ರಂ, ತಬ್ರೇಜ್‌ ತಿಳಿಸಿದರು. 

ಹೆಚ್ಚಾದ ಹೂ ದರ: ‘ರಾಜ್ಯದಲ್ಲಿ ಮಳೆ ಕೊರತೆಯಿಂದ ಮಾರುಕಟ್ಟೆಗೆ ಹೂವು ಆವಕ ಕಡಿಮೆಯಾಗಿದ್ದು, ಆದ್ದರಿಂದ ಸ್ವಲ್ಪ ದುಬಾರಿಯಾಗಿದೆ. ಆದರೂ, ವರಮಹಾಲಕ್ಷ್ಮಿ ಹಬ್ಬದ ದರ‌ಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ’ ಎಂದು ಕೆ.ಆರ್. ಮಾರುಕಟ್ಟೆಯ ಹೂವಿನ ವ್ಯಾಪಾರಿ ಮಂಜುನಾಥ್ ಹೇಳಿದರು.

‘ಈ ಬಾರಿಯ ಗಣೇಶ ಹಬ್ಬದ ಸಂದರ್ಭದಲ್ಲಿ ಮಲ್ಲಿಗೆ ಕೆ.ಜಿ.ಗೆ ₹800, ಕನಕಾಂಬರ ₹1 ಸಾವಿರ ಇದೆ. ಸೇವಂತಿಗೆ ₹ 150, ಗುಲಾಬಿ ₹ 200, ಸುಗಂಧರಾಜ ₹200ರಂತೆ ಮಾರಾಟವಾಗುತ್ತಿವೆ’ ಎಂದು ತಿಳಿಸಿದರು.

ಗರಿಕೆ, ಬೇಲದಹಣ್ಣು, ಎಕ್ಕದ ಹೂವಿನಹಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿತ್ತು. ಜತೆಗೆ ಬಾಳೆಕಂಬ, ಹೂವಿನ ಹಾರ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ಕೊಂಡೊಯ್ದರು. ಎಕ್ಕದ ಹಾರಕ್ಕೆ ₹50, ಗರಿಕೆಗೆ ₹30, ಪ್ರದೇಶವಾರು ದರದಲ್ಲಿ ವ್ಯತ್ಯಾಸವಿತ್ತು. ಬಾಳೆಕಂಬ ಜೋಡಿಗೆ ₹50ನಿಂದ ₹200 ವರೆಗೆ ಮಾರಾಟವಾಗುತ್ತಿದ್ದವು.

ಗಾಂಧಿ ಬಜಾರ್, ಜಯನಗರ, ಬಸವನಗುಡಿ, ಬನಶಂಕರಿ, ರಾಜಾಜಿನಗರ, ಮಲ್ಲೇಶ್ವರ ಸೇರಿ ನಗರದ ವಿವಿಧ ಭಾಗಗಳಲ್ಲಿ ಹೂವು, ಹಣ್ಣಿನ ತಾತ್ಕಾಲಿಕ ಮಳಿಗೆಗಳು, ಗಣೇಶ ಮೂರ್ತಿಯ ಅಂಗಡಿಗಳು ತಲೆ ಎತ್ತಿವೆ.

ಮಾರುಕಟ್ಟೆಗೆ ಬಗೆ ಬಗೆಯ ಗೌರಿ-ಗಣೇಶ ಮೂರ್ತಿಗಳು ಬಂದಿದ್ದು, ₹100 ರಿಂದ  ₹5 ಸಾವಿರದವರೆಗೆ ಮೂರ್ತಿಗಳು ಮಾರಾಟವಾಗುತ್ತಿವೆ. ಮತ್ತೊಂದೆಡೆ ಗೌರಿ ಹಬ್ಬ ಆಚರಿಸುವವರು ಗಜಗೌರಿ, ಮಡಿಗೌರಿ ಮತ್ತಿತರ ಬಗೆಯ ಗೌರಿಯ ಮೂರ್ತಿಗಳನ್ನು ಮಹಿಳೆಯರು ಖರೀದಿಸಿದರು.

ಹೆಸರಘಟ್ಟದ ಕಲಾವಿದೆ ಗೌರಿ ಅವರ ಮನೆಯಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳು ಮಾರಾಟಕ್ಕೆ ಸಿದ್ಧಪಡಿಸಿದರು. ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ಹೆಸರಘಟ್ಟದ ಕಲಾವಿದೆ ಗೌರಿ ಅವರ ಮನೆಯಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳು ಮಾರಾಟಕ್ಕೆ ಸಿದ್ಧಪಡಿಸಿದರು. ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ಗೌರಿ–ಗಣೇಶ ಹಬ್ಬ: ತರಕಾರಿ -ಹೂವು ದರ ಕಡಿಮೆ, ಖರೀದಿ ಜೋರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT