ಬೆಂಗಳೂರು: ಪಾಲಿಕೆ ಸದಸ್ಯರ ಅವಧಿ ಮುಕ್ತಾಯವಾದ ನಂತರ ಸರ್ಕಾರದ ಆದೇಶದಂತೆ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಐಎಎಸ್ ಹಿರಿಯ ಅಧಿಕಾರಿ ಗೌರವ ಗುಪ್ತ ಅಧಿಕಾರ ಸ್ವೀಕರಿಸಿದರು.
ಗೌರವ ಗುಪ್ತ ಅವರನ್ನುಆಯುಕ್ತ ಎನ್. ಮಂಜುನಾಥಪ್ರಸಾದ್ ಬರ ಮಾಡಿಕೊಂಡರು.
‘ಕೋವಿಡ್ ವಿಷಯವನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿ ನಿಯಂತ್ರಣಕ್ಕಾಗಿ ಸಾಕಷ್ಟು ಕೆಲಸ ಮಾಡಿದೆ. ಆಗಿರುವ ಕೆಲಸದ ಬಗ್ಗೆ ಸಮೀಕ್ಷೆ ನಡೆಸಿ ಮುಂದೆ ಆಗಬೇಕಿರುವ ಕೆಲಸಗಳ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜತೆ ಚರ್ಚೆ ನಡೆಸುತ್ತೇನೆ’ ಎಂದರು.
‘ವಾರ್ಡ್ ಮಟ್ಟದಲ್ಲಿ ಜನರೊಟ್ಟಿಗಿದ್ದು ಕೆಲಸ ಮಾಡುತ್ತಿದ್ದ ಪಾಲಿಕೆ ಸದಸ್ಯರ ಅವಧಿ ಮುಗಿದಿದ್ದರೂ ಎಲ್ಲರ ಸಹಕಾರ ಪಡೆದು ಕಾರ್ಯನಿರ್ವಹಿಸುತ್ತೇವೆ. ಜನಪರವಾದ ಆಡಳಿತಕ್ಕೆ ಜನರ ಮತ್ತು ಜನಪ್ರತಿನಿಧಿಗಳ ಸಹಕಾರ ಮುಖ್ಯ’ ಎಂದು ಹೇಳಿದರು.
‘ಪ್ರತಿ ಮಳೆಗಾಲಕ್ಕೂ ಪಾಲಿಕೆ ಸಿದ್ಧವಾಗಿರುತ್ತದೆ. ಈಗ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ ಕೊರತೆಗಳಿದ್ದರೆ ಸರಿಪಡಿಸಲಾಗುವುದು’ ಎಂದರು.