ಬೆಂಗಳೂರು: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
‘ಟಿ.ಗೋವಿಂದ ಬಂಧಿತ ಆರೋಪಿ. ಈತನಿಂದ ₹3.50 ಲಕ್ಷ ಬೆಲೆಬಾಳುವ 74 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಜ.7ರಂದು ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ವಾಸವಿದ್ದ ಮಹಿಳೆಯೊಬ್ಬರನ್ನು ನೋಡಲು ಜೀವ ಎಂಬುವರು ಬಂದಿದ್ದು, ಇವರೊಂದಿಗೆಆರೋಪಿ ಗೋವಿಂದ ಕೂಡ ಇದ್ದ.
ಜೀವ ಮತ್ತು ಮಹಿಳೆ ತಿಂಡಿ ತಿನ್ನಲು ಹೊರಗೆ ಹೋಗಿದ್ದ ಸಮಯದಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸರು ಆರೋಪಿಯನ್ನು ಸೋಮವಾರ ಪತ್ತೆ ಹಚ್ಚಿದ್ದು, ದಸ್ತಗಿರಿ ಮಾಡಿ ಆತ ಕದ್ದಿದ್ದ ಚಿನ್ನದ ಓಲೆ ಮತ್ತು ಸರಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 380ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.