ಬೆಂಗಳೂರು: ಗೊಟ್ಟಿಗೆರೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ಡಾಂಬರು ಮಾಡಿದ್ದ ರಸ್ತೆಗಳು ಕಿತ್ತುಬರುತ್ತಿದ್ದು, ಗುಣಮಟ್ಟದ ಡಾಂಬರು ಬಳಸದಿರುವುದೇ ಇದಕ್ಕೆ ಕಾರಣ ಎಂದು ನಾಗರಿಕರು ದೂರಿದ್ದಾರೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೊಟ್ಟಿಗೆರೆ ವಾರ್ಡ್ನ ರಜತಾದ್ರಿ ಬಡಾವಣೆ, ಗಾಯತ್ರಿ ತಪೋವನ ಬಡಾವಣೆ, ವೆಂಕಟೇಶ್ವರ ಬಡಾವಣೆ, ಪವಮಾನ ಬಡಾವಣೆ ಸೇರಿದಂತೆ ಈ ಭಾಗದ ಪ್ರದೇಶಗಳಲ್ಲಿ ಡಾಂಬರೀಕರಣವನ್ನು ಒಂದು ವಾರದಿಂದೀಚೆಗೆ ಮಾಡಲಾಗುತ್ತಿದೆ. ಆದರೆ, ಡಾಂಬರು ಹಪ್ಪಳದಂತೆ ಎದ್ದು ಬರುತ್ತಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
‘ಚುನಾವಣೆ ಹತ್ತಿರವಾಗುತ್ತಿರುವಂತೆ ಡಾಂಬರು ಹಾಕುವ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ. ಆದರೆ, ಮತದಾನಕ್ಕೆ ಮುನ್ನವೇ ಈ ಡಾಂಬರು ಕಿತ್ತು ಬರುತ್ತಿದೆ. ಇಂತಹ ಅವಸರದ ಕಾಮಗಾರಿ ಏಕೆ ಮಾಡಬೇಕು’ ಎಂದು ಪ್ರಶ್ನಿಸಿದ್ದಾರೆ.
‘10 ಎಂಎಂ ಜೆಲ್ಲಿ ಬಳಸಿ ಡಾಂಬರ್ ಹಾಕಬೇಕು. ಕನಿಷ್ಠ 120ರಿಂದ 140 ಡಿಗ್ರಿ ಬಿಸಿಯಲ್ಲಿ ಡಾಂಬರ್ ಇರಬೇಕು. ಡಾಂಬರ್ ಹಾಕುವ ಮೊದಲು ರಸ್ತೆಯನ್ನು ಸ್ವಚ್ಛಗೊಳಿಸಬೇಕು. ಆದರೆ, ಸ್ಟೋನ್ ಡಸ್ಟ್ ಬಳಸಿ ಡಾಂಬರ್ ಹಾಕಲಾಗಿದ್ದು, ಡಾಂಬರೀಕರಣಕ್ಕೆ ಪಾಲಿಸಬೇಕಾದ ನಿಯಮಗಳನ್ನೇ ಗಾಳಿಗೆ ತೂರಿರುವುದು ಸ್ಪಷ್ಟವಾಗಿ ತೋರುತ್ತದೆ. ಸರಿಯಾದ ಪ್ರಮಾಣದಲ್ಲಿ ಡಾಂಬರ್ ಮಿಕ್ಸ್ ಮಾಡದೆ ಕಾಮಗಾರಿ ಮಾಡಲಾಗಿದ್ದು, ದಪ್ಪ ಮಾಡದೇ ಕೇವಲ ಅರ್ಧ ಇಂಚು ಹಾಕಿರುವುದರಿಂದ ರಸ್ತೆ ಕಳಪೆಯಾಗಿ ಕಿತ್ತು ಬರುತ್ತಿದೆ’ ಎಂದು ಸ್ಥಳೀಯ ನಿವಾಸಿ ಕೃಷ್ಣಪ್ಪ ದೂರಿದ್ದಾರೆ.
‘ಅವೈಜ್ಞಾನಿಕವಾಗಿ ಡಾಂಬರೀಕರಣ, ಕಾಟಾಚಾರದ ಕೆಲಸ ಮಾಡಿ ಸರ್ಕಾರದ ಅನುದಾನ ದುರುಪಯೋಗ ಪಡಿಸಿಕೊಂಡಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಎಂಜಿನಿಯರ್ ಹಾಗೂ ಅಧಿಕಾರಿಗಳ ಮೇಲೆ ತನಿಖೆ ನಡೆಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.