ಬೆಂಗಳೂರು: ‘ರೈತರ ಮಕ್ಕಳೂ ಬೇರೆ ಬೇರೆ ರಂಗಗಳಿಗೂ ಪ್ರವೇಶ ಮಾಡಿದರೆ ವಧು ಮತ್ತು ಗೌರವ ಎರಡೂ ಹುಡುಕಿಕೊಂಡು ಬರಲಿವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
‘ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್’ ಆಯೋಜಿಸಿದ್ದ ‘ನವ ಕರ್ನಾಟಕ ಶೃಂಗ’ ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ‘ರೈತರ ಮಕ್ಕಳಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಅವರನ್ನು ಆರ್ಥಿಕವಾಗಿ ಸದೃಢ ಮಾಡಲು ನಿಮ್ಮ ಕಾರ್ಯಕ್ರಮಗಳೇನು’ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.
‘ರೈತರ ಮಕ್ಕಳೂ ಎಲ್ಲಾ ರಂಗಕ್ಕೂ ಪ್ರವೇಶ ಮಾಡಬೇಕು ಎಂಬ ಉದ್ದೇಶದಿಂದಲೇ ಮುಖ್ಯಮಂತ್ರಿಯಾದ ಕೂಡಲೇ ವಿದ್ಯಾನಿಧಿ ಯೋಜನೆಯನ್ನು ಘೋಷಣೆ ಮಾಡಿದೆ. ರೈತರೇ ಕಂಪನಿಗಳನ್ನು ನಡೆಸುವಂತಾಗಬೇಕು. ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಅವರಿಗೆ ಆ ಶಕ್ತಿ ನೀಡುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ವಿವರಿಸಿದರು.
‘ಒಂದು ಟ್ರಿಲಿಯನ್ ಡಾಲರ್ ಗುರಿ ತಲುಪಲು ನೀಲನಕ್ಷೆ ಸಿದ್ಧವಿದೆ. ದೊಡ್ಡ ಗುರಿ ಹೊಂದಿದರೆ, ಸಾಧನೆಗೆ ಹಲವು ಸ್ಫೂರ್ತಿಗಳು ದೊರಕುತ್ತವೆ. ನಮಗೆ ನಮ್ಮ ಶಕ್ತಿ ಗೊತ್ತಿದೆ. ಈಗ 0.5 ಟ್ರಿಲಿಯನ್ ಡಾಲರ್ ಗುರಿ ತಲುಪಿದ್ದೇವೆ. ಇನ್ನು ಮೂರು ವರ್ಷಗಳಲ್ಲಿ 0.5 ಟ್ರಿಲಿಯನ್ ಡಾಲರ್ ಗುರಿ ತಲುಪಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.
‘ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ನವ ಶಿಕ್ಷಣ ನೀತಿ ಅನುಷ್ಠಾನದಲ್ಲೂ ಮುಂದಿದ್ದೇವೆ. ಇವೆಲ್ಲವೂ ನವ ಕರ್ನಾಟಕದ ದಿಕ್ಸೂಚಿಗಳು’ ಎಂದು ಬಣ್ಣಿಸಿದರು. ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಸಂವಾದ ನಡೆಸಿಕೊಟ್ಟರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.