ಬೆಂಗಳೂರು: ಉದ್ಯಮಿ ವಿಜಯ್ ಮಲ್ಯ ಒಡೆತನದ ಊಟಿಯಲ್ಲಿರುವ ಬಂಗಲೆ ಖರೀದಿಗೆ ಹವಾಲಾ ಮಾರ್ಗದಲ್ಲಿ ಹಣ ಬರುತ್ತಿರುವ ಸುಳಿವು ಹಿಡಿದು ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಮೂವರನ್ನು ಬಂಧಿಸಿ ₹75 ಲಕ್ಷ ನಗದು ಜಪ್ತಿ ಮಾಡಿದ್ದಾರೆ.
ಹೈದರಾಬಾದ್ನ ಮುಜಾಹಿದ್ದೀನ್, ನಿಸಾರ್, ಬೆಂಗಳೂರಿನ ವಿ.ವಿ.ಪುರ ನಿವಾಸಿ ಚಿರಾಗ್ ಬಂಧಿತರು. ಕುಖ್ಯಾತ ಹವಾಲಾ ಡೀಲರ್ ದಿನೇಶ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಊಟಿಯಲ್ಲಿರುವ ಮಲ್ಯ ಅವರ ಬಂಗಲೆಯು ಐದು ವರ್ಷಗಳಿಂದ ಖಾಸಗಿ ಕಂಪನಿಯೊಂದರ ಸುಪರ್ದಿಯಲ್ಲಿತ್ತು. ಇತ್ತೀಚೆಗೆ ₹7.5 ಕೋಟಿಗೆ ಅದನ್ನು ಖರೀದಿ ಮಾಡಿದ್ದ ಮುಜಾಹಿದ್ದೀನ್, ₹75 ಲಕ್ಷ ಮುಂಗಡ ಕೊಡಲು ಸ್ನೇಹಿತ ನಿಸಾರ್ ಜೊತೆ ಕ್ರೆಟಾ ಕಾರಿನಲ್ಲಿ ( ಟಿ.ಎನ್-43-ಎಚ್-9641) ಸಜ್ಜನ ರಾವ್ ವೃತ್ತಕ್ಕೆ ಬಂದಿದ್ದ.
ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ಎಸಿಪಿ ಸುಬ್ರಹ್ಮಣ್ಯ ನೇತೃತ್ವದ ತಂಡ ದಾಳಿ ನಡೆಸಿದೆ.
ದಿನೇಶ್ ಈ ಒಪ್ಪಂದದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ. ಮುಜಾಹೀದ್ನಿಂದ ಹಣ ಪಡೆದುಕೊಂಡು ಬರುವಂತೆ ಆತ ತನ್ನ ಸಹಚರ ಚಿರಾಗ್ನನನ್ನು ಸಜ್ಜನ್ ರಾವ್ ವೃತ್ತಕ್ಕೆ ಕಳುಹಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.