ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿ ಸುರಿದ ದಾಖಲೆ ಮಳೆಗೆ, 265 ಮರಗಳು ಧರೆಗುರುಳಿವೆ. ನೂರಾರು ವಿದ್ಯುತ್ ಕಂಬಗಳೂ ನೆಲಕ್ಕೆ ಬಿದ್ದಿದ್ದರಿಂದ ಹತ್ತಾರು ವಾಹನಗಳು ಜಖಂಗೊಂಡಿವೆ. ಸೋಮವಾರ ಮಧ್ಯಾಹ್ನದವರೆಗೂ ಹಲವು ಪ್ರದೇಶಗಳು, ರಸ್ತೆಗಳು ನೀರಿನಿಂದ ತುಂಬಿದ್ದವು.
ಬಿರುಗಾಳಿಯಿಂದ ಧಾರಾಕಾರವಾಗಿ ಸುರಿದ ಮಳೆ, ಮರಗಳನ್ನು ಧರೆಗುರುಳಿಸಿತು. ಪಶ್ಚಿಮ ಹಾಗೂ ದಕ್ಷಿಣ ಭಾಗದಲ್ಲಿ ಅತಿಹೆಚ್ಚು ಮರಗಳು ಬಿದ್ದಿವೆ. ವಿಜಯನಗರ, ಹಂಪಿನಗರ, ಜಯನಗರ, ಬನಶಂಕರಿ ಪ್ರದೇಶಗಳಲ್ಲಿ ಮರಗಳು ಮನೆ ಹಾಗೂ ವಾಹನಗಳ ಮೇಲೆ ಬಿದ್ದಿವೆ. ಇವುಗಳನ್ನು ತೆರವುಗೊಳಿಸಲು ಬಿಬಿಎಂಪಿ ಸಿಬ್ಬಂದಿ ಸೋಮವಾರ ಸಂಜೆಯವರೆಗೂ ಸಾಹಸಪಟ್ಟರು. ಆದರೂ, ರಸ್ತೆಗಳಲ್ಲಿ ಬಿದ್ದಿದ್ದ ಮರಗಳು, ಕೊಂಬೆಗಳು ಸಂಪೂರ್ಣ ತೆರವಾಗಲಿಲ್ಲ.
ಹಂಪಿನಗರದಲ್ಲಿ ಮರವೊಂದು ಮನೆಯ ಮೇಲೆ ಭಾನುವಾರ ರಾತ್ರಿ ಬಿದ್ದಿತ್ತು. ಸೋಮವಾರದ ಮಧ್ಯಾಹ್ನದವರೆಗೂ ಮರ ತೆರವುಗೊಳಿಸದ್ದರಿಂದ. ಆ ಕುಟುಂಬದವರ ಮನೆಯಿಂದ ಹೊರಬರಲಾರದೆ ಪರಿತಪಿಸಿದರು. ಪೈಪ್ಲೈನ್ ರಸ್ತೆಯಲ್ಲಿ ಮನೆ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸುತ್ತಿರುವ ಸಂದರ್ಭದಲ್ಲಿ ಕೊಂಬೆಯೊಂದು ವ್ಯಕ್ತಿಯೊಬ್ಬರ ಮೇಲೆ ಬಿತ್ತು. ತಲೆಯಿಂದ ರಕ್ತಸುರಿಯುತ್ತಿದ್ದುದರಿಂದ ಅವರನ್ನು ಬಿಬಿಎಂಪಿ ಸಿಬ್ಬಂದಿ ಆಸ್ಪತ್ರೆಗೆ ಕೊಂಡೊಯ್ದರು.
ರಾಜರಾಜೇಶ್ವರಿನಗರ, ಬಸವೇಶ್ವರನಗರ, ಯಲಹಂಕ, ದಾಸರಹಳ್ಳಿ, ಪೀಣ್ಯ, ಕೆಂಗೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗಿಡ–ಮರ ಹಾಗೂ ಕೊಂಬೆಗಳು ಬಿದ್ದವು. ನಗರದ ಹಲವು ಭಾಗಗಳಲ್ಲಿ ಕೆಲವು ಸ್ಕೂಟರ್, ಬೈಕ್, ಕಾರು, ಆಟೊಗಳ ಮೇಲೆ ಮರ ಬಿದ್ದು ಜಖಂಗೊಂಡವು. ಕೆಲ ಸವಾರರಿಗೆ ಸಣ್ಣಪುಟ್ಟ ಗಾಯಗಳಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.