ಬೆಂಗಳೂರು:ನಗರದಲ್ಲಿ ಜೋರು ಮಳೆ ಆಗುತ್ತಿದ್ದು, ಬಹುತೇಕ ಪ್ರದೇಶಗಳಲ್ಲಿ ವರುಣ ಅರ್ಭಟಿಸಿ ಸುರಿಯುತ್ತಿದ್ದಾನೆ.
ರಾಜಾಜಿನಗರ, ವಿಜಯನಗರ, ಯಶವಂತಪುರ, ಪೀಣ್ಯ, ಶಾಂತಿನಗರ, ಮೆಜೆಸ್ಟಿಕ್, ಗಾಂಧಿನಗರ, ಬಸವನಗುಡಿ, ಆರ್.ಟಿ.ನಗರ, ಹೆಬ್ಬಾಳ, ಮಡಿವಾಳ, ಹೊಸಕೆರೆಹಳ್ಳಿ, ರಾಜರಾಜೇಶ್ವರಿ ನಗರ, ಕೆಂಗೇರಿ ಹಾಗೂ ಸುತ್ತಮುತ್ತ ಮಳೆ ಜೋರಾಗಿದೆ.
ಬೆಳಿಗ್ಗೆಯಿಂದಲೂ ನಗರದಲ್ಲಿ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಹಲವೆಡೆ ಜೋರಾಗಿ ಮಳೆ ಆರಂಭವಾಗಿದೆ. ಸಂಜೆಯೂ ಮಳೆ ಪ್ರಮಾಣ ಹೆಚ್ಚಿದ್ದರಿಂದ, ಪ್ರಮುಖ ರಸ್ತೆಗಳಲ್ಲಿ ನೀರು ಹರಿಯಿತು.
ಹಲವು ಕೆಳ ಸೇತುವೆಗಳಲ್ಲಿ ನೀರು ಹರಿಯುತ್ತಿದ್ದು, ಅದರಲ್ಲಿ ವಾಹನಗಳು ಸಂಚರಿಸುತ್ತಿವೆ. ಕೆಲ ವಾಹನಗಳು ಕೆಟ್ಟಿದ್ದು, ಅವುಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದೆ. ಅದರಿಂದ ದಟ್ಟಣೆಯೂ ಉಂಟಾಗಿದೆ.
'ನಗರದಲ್ಲಿ ಜೋರು ಮಳೆ ಇದೆ. ದಕ್ಷಿಣ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ರಸ್ತೆಯಲ್ಲಿ ನೀರು ನಿಂತಿರುವ ದೂರುಗಳು ಬಂದಿವೆ. ಮಳೆ ಕಡಿಮೆಯಾದ ನಂತರ ಹಾನಿ ಬಗ್ಗೆ ಮತ್ತಷ್ಟು ದೂರು ಬರಬಹುದು' ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದರು.
ಕಳೆದ ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರಿದಿದೆ.ಸಂಜೆ ಸುರಿದ ಭಾರಿ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.
ಮೂರು ಗಂಟೆ ನಿರಂತರ ಮಳೆ: ಗಾಂಧಿ ಬಜಾರು ಮತ್ತು ಸುತ್ತಮುತ್ತಲಪ್ರದೇಶದಲ್ಲಿ ಹಬ್ಬದ ವ್ಯಾಪಾರಕ್ಕಾಗಿ ಹೂವು, ಹಣ್ಣು, ಬಾಳೆ ಮಾರಾಟಕ್ಕೆ ಬಂದಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆ ಕೊಂಚ ಕಡಿಮೆಯಾಗುತ್ತಿದ್ದಂತೆ ಬಸವನಗುಡಿ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಿದೆ, ರಸ್ತೆ ತುಂಬೆಲ್ಲ ಮಣ್ಣು–ಕಲ್ಲು ತುಂಬಿದೆ.
ರಾಮನಗರದಲ್ಲೂ ಮಳೆ
ರಾಮನಗರದಲ್ಲಿ ಸಂಜೆ ಕೆಲ ಹೊತ್ತು ಉತ್ತಮ ಮಳೆ ಸುರಿಯಿತು. ಮೋಡಗಳು ಕವಿದಿದ್ದು ಮತ್ತೆ ಮಳೆ ಆಗುವ ನಿರೀಕ್ಷೆ ಇದೆ.ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸತತವಾಗಿ ವರ್ಷಧಾರೆ ಆಗುತ್ತಿದೆ. ಇದರಿಂದ ಸೊಪ್ಪು, ತರಕಾರಿ, ವೀಳ್ಯದೆಲೆ ಸೇರಿದಂತೆ ಹಲವು ಬೆಳೆಗಳಿಗೆ ಹಾನಿಯಾಗಿದೆ.
ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ರಾಜಕಾಲುವೆ
ಬೆಂಗಳೂರಿನ ಬನಶಂಕರಿ 6ನೇ ಹಂತದಲ್ಲಿ ಮಧ್ಯಾಹ್ನ 3.45ರಿಂದ ಆರಂಭವಾದ ಬಿರುಸಿನ ಮಳೆ ಸುಮಾರು ಮೂರು ಗಂಟೆಗಳಕಾಲ ಸತತವಾಗಿ ಸುರಿದಿದೆ.
ಪರಿಣಾಮವಾಗಿ ಬಡಾವಣೆಯಲ್ಲಿದ್ದ ರಾಜಕಾಲುವೆಗಳಲ್ಲ ಭರ್ತಿಯಾಗಿವೆ. ಆರನೇ ಹಂತದಲ್ಲಿರುವ ಮುಖ್ಯ ರಾಜಕಾಲುವೆ ಅಪಾಯಮಟ್ಟದಲ್ಲಿ ತುಂಬಿ ಹರಿದಿದೆ.
ರಾಜಕಾಲುವೆಯಿಂದ ಹರಿದ ನೀರು ಇದೇ ಬಡಾವಣೆಯಲ್ಲಿರುವ ಐದು ಎಕರೆ ವಿಸ್ತೀರ್ಣದ ಬಿಡಿಎ ಉದ್ಯಾನದೊಳಗೆ (ಶಿಲ್ಪೋದ್ಯಾನ) ನುಗಿದೆ. ಪರಿಣಾಮವಾಗಿ ಇಡೀ ಉದ್ಯಾನ ನೀರಿನಲ್ಲಿ ಮುಳುಗಿದೆ. ಸಂಜೆ 6.30ಗಂಟೆಗೆ ಮಳೆ ಬಿಡುವುಕೊಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.