ಮಹದೇವಪುರ: ಎಂದೂ ಬತ್ತದ ಹೂಡಿ ಕೆರೆ ಇದೀಗ ಸಂಪೂರ್ಣವಾಗಿ ಒಣಗಿ ಹೋಗಿದೆ. ಹತ್ತು ವರ್ಷಗಳ ಹಿಂದೆ ಕೆರೆಯಲ್ಲಿ ಶುದ್ಧವಾದ ನೀರಿತ್ತು. ಸುತ್ತಮುತ್ತಲಿನ ರೈತರು ತರಕಾರಿ ಬೆಳೆಯಲು ಕೆರೆಯ ನೀರನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಕೆರೆಯ ನೀರು ಹಂತ ಹಂತವಾಗಿ ಕಲುಷಿತಗೊಳ್ಳತೊಡಗಿತು. ಸುತ್ತಮುತ್ತ ಅನೇಕ ಬಹುಮಹಡಿ ವಸತಿ ಸಮುಚ್ಚಯಗಳು ತಲೆ ಎತ್ತಿದವು. ಅವುಗಳಿಂದ ಹರಿದು ಬರುವ ಕಲುಷಿತ ನೀರು ಕೆರೆಗೆ ಬಂದು ಸೇರತೊಡಗಿತು. ಇದರಿಂದಾಗಿ ಕೆರೆ ಸಂಪೂರ್ಣವಾಗಿ ಕೊಳಕಾಯಿತು. ಈಗ ಮಾತ್ರ ಇಡೀ ಕೆರೆ ಬತ್ತಿ ಹೋಗಿದೆ ಎಂದು ಸ್ಥಳೀಯರಾದ ಹರೀಶ ಬೇಸರ ವ್ಯಕ್ತಪಡಿಸಿದರು.