ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಗರ ಯೋಜನೆ ಉಪ ನಿರ್ದೇಶಕರಾಗಿದ್ದ ಆರ್. ವಿ. ಕಾಂತರಾಜು ವಿರುದ್ಧ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ತನಿಖೆ ಮುಂದುವರಿಸಲು ಹೈಕೋರ್ಟ್ ಗುರುವಾರ ಅಸ್ತು ಎಂದಿದೆ.
ಕಾಂತರಾಜು ವಿರುದ್ಧದ ಎಫ್ಐಆರ್ ರದ್ದುಪಡಿಸಲು ನಿರಾಕರಿಸಿರುವ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಪ್ರಕರಣ ಇನ್ನೂ ತನಿಖಾ ಹಂತದಲ್ಲಿದ್ದು, ಎಫ್ಐಆರ್ ರದ್ದುಪಡಿಸಲು ಸಾಧ್ಯವಿಲ್ಲ’ ಎಂದು ಅರ್ಜಿ ವಿಲೇವಾರಿ ಮಾಡಿದೆ.
ಎಸಿಬಿ ಅಧಿಕಾರಿಗಳು 2018ರ ಜನವರಿ 3ರಂದು ರಾಜ್ಯದ ವಿವಿಧೆಡೆ 12 ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಬಿಡಿಎ ನಗರ ಯೋಜನೆ ಉಪನಿರ್ದೇಶಕ ಆರ್. ವಿ. ಕಾಂತರಾಜು ಅವರ ಮಹಾಲಕ್ಷ್ಮೀ ಬಡಾವಣೆಯ ಮನೆ ಹಾಗೂ ಕಚೇರಿ ಮೇಲೂ ದಾಳಿ ನಡೆಸಲಾಗಿತ್ತು. ಕಾಂತರಾಜು ತಮ್ಮ ಆದಾಯಕ್ಕಿಂತ ಶೇ 150ರಷ್ಟು ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿತ್ತು. ಕಾಂತರಾಜು ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.