ಕೆ.ಆರ್.ಪುರ: ಸುತ್ತಮುತ್ತ ಉತ್ತಮ ಪರಿಸರ, ನಲಿ–ಕಲಿ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳೇ ತಯಾರಿಸಿದ ಚಿತ್ತಾಕರ್ಷಕ ಚಿತ್ತಾರಗಳು, ಕನ್ನಡ ಸಾಹಿತ್ಯದ ಕುರಿತು ಆಸಕ್ತಿ ಮೂಡಿಸುವ ಬರಹಗಳು... ವಿದ್ಯಾರ್ಥಿಗಳ ವಿವಿಧ ಚಟುವಟಿಕೆ ಈ ಶಾಲೆ ಎಷ್ಟು ಕ್ರಿಯಾಶೀಲವಾಗಿದೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ.
ಶೈಕ್ಷಣಿಕ ಚಟುವಟಿಕೆ ವಿಷಯದಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಿದೆಕೆ.ಆರ್.ಪುರ ಸಮೀಪದ ಹೊರಮಾವು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಆದರೆ, ಈ ಶಾಲಾ ವಿದ್ಯಾರ್ಥಿಗಳನ್ನು ಒಂದು ಕೊರತೆ ಕಾಡುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇಲ್ಲಿ ಪೀಠೋಪಕರಣಗಳಿಲ್ಲ. ಚಿಣ್ಣರು ನೆಲದಲ್ಲೇ ಕುಳಿತು ಪಾಠ ಕೇಳುವ ಪರಿಸ್ಥಿತಿ ಇಲ್ಲಿದೆ.
ಪೂರ್ವ ತಾಲ್ಲೂಕು ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬರುವ ಈ ಶಾಲೆಯಲ್ಲಿ 110 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೊರಮಾವು ಗ್ರಾಮದಲ್ಲಿ 1953 ರಲ್ಲಿ ಆರಂಭವಾಗಿರುವ ಈ ಶಾಲೆ ಈ ಭಾಗದ ಬಡ, ಮಧ್ಯಮ ವರ್ಗಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಹೊರಮಾವು ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳ ವಿದ್ಯಾರ್ಥಿಗಳು ಈ ವಿದ್ಯಾಲಯಕ್ಕೆ ಬರುತ್ತಾರೆ.
ಈ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಮಕ್ಕಳ ನೀರಿನ ದಾಹ ನೀಗಿಸಲು ಹೊರಗಡೆಯ ಶುದ್ಧ ಕುಡಿಯುವ ನೀರಿನ ಘಟಕದಿಂದ ಕ್ಯಾನ್ಗಳಲ್ಲಿ ನೀರು ತರಬೇಕಿದೆ.
ತೊಟ್ಟಿ ನಿರ್ಮಿಸಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇದರಿಂದ ಶೌಚಾಲಯದ ಬಳಕೆಗೂ ನೀರಿನ ಸಮಸ್ಯೆ ತಪ್ಪುತ್ತದೆ. ಈ ನಿಟ್ಟಿನಲ್ಲಿ ಸರ್ಕಾರೇತರ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಕಾರ್ಯಕ್ರಮಗಳಡಿ ಆರ್ಥಿಕ ನೆರವು ನೀಡಿದರೆ ಒಳ್ಳೆಯದು ಎನ್ನುತ್ತಾರೆ ಶಾಲೆಯ ಶಿಕ್ಷಕಿ ವೇದಾವತಿ.
ಈ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಆದರೆ, ಮಕ್ಕಳು ನೆಲದಲ್ಲೇ ಕುಳಿತು ಪಾಠ ಕೇಳಬೇಕಾದ ಸ್ಥಿತಿ ಇದೆ. ಈ ಕೊರತೆ ನೀಗಿಸಬೇಕಿದೆ.