ಬೆಂಗಳೂರು: ‘ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿ ಮಾಡುವುದೇ ಪರಿಹಾರ ಅಲ್ಲ. ಅಗತ್ಯ ಮುಂಜಾಗ್ರತೆಗಳನ್ನು ಸರ್ಕಾರ ತೆಗೆದುಕೊಂಡರೆ, ಸೋಂಕು ಹರಡುವಿಕೆ ತಪ್ಪಿಸಬಹುದು’ ಎಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.
‘ಸರ್ಕಾರ ಹೋಟೆಲ್ ಮಾಲೀಕರೊಂದಿಗೆ ಚರ್ಚಿಸದೆ, ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಹಾಗೂ ಲಾಕ್ಡೌನ್ನಂತಹ ತರಾತುರಿ ನಿರ್ಣಯಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ. ವ್ಯಾಪಾರಿ ಸಮೂಹಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದ್ದಾರೆ.
‘ಗಡಿ ಪ್ರದೇಶಗಳಲ್ಲಿ ಇರುವ ಲೋಪದೋಷಗಳನ್ನು ಮೊದಲು ಸರಿಪಡಿಸಿ. ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಚುರುಕುಗೊಳಿಸಬೇಕು. ಜನಸಾಮಾನ್ಯರು, ಕಾರ್ಮಿಕರು, ಗ್ರಾಹಕರು ಹಾಗೂ ಮಾಲೀಕರಿಗೆ ತೊಂದರೆಯಾಗದಂತೆ ನೋಡಿಕೊಂಡು, ಆತಿಥ್ಯ ಕ್ಷೇತ್ರ ಕುಸಿಯದಂತೆ ರಕ್ಷಿಸಬೇಕು’ ಎಂದೂ ಹೇಳಿದ್ದಾರೆ.