ಬೆಂಗಳೂರು: ಕಣ್ಣು ಹಾಯಿಸಿದಲ್ಲೆಲ್ಲಾ ಕಿತ್ತುಹೋಗಿರುವ ರಸ್ತೆ... ಹರಡಿರುವ ಜಲ್ಲಿಕಲ್ಲುಗಳು... ವಾಹನಗಳು ಸಾಗುವಾಗ ಪಾದಚಾರಿಗಳ ಮುಖಕ್ಕೆ ರಾಚುವ ದೂಳು. ರಸ್ತೆಯ ಮೇಲೇ ಹರಿಯುತ್ತಿರುವ ಚರಂಡಿ ನೀರು....
ಇದ್ಯಾವುದೋ ಕುಗ್ರಾಮದ ಚಿತ್ರಣವಲ್ಲ. ಸುಂಕದಕಟ್ಟೆ ಮೂಲಕ ಹಾದು ಹೋಗುವ ಮಾಗಡಿ ಮುಖ್ಯರಸ್ತೆಯ ದುಸ್ಥಿತಿ ಇದು. ಹಳ್ಳದಂತಾಗಿರುವ ಈ ರಸ್ತೆಯಲ್ಲಿ ಜೀವ ಬಿಗಿ ಹಿಡಿದೇ ಸಾಗಬೇಕು. ಅಲ್ಪ ಮೈಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ.
ಉದ್ಯಾನನಗರಿಯಿಂದ ಮಾಗಡಿ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹಾಳಾಗಿ ತಿಂಗಳುಗಳೇ ಉರುಳಿವೆ. ಮಳೆ ಬಂದಾಗಲೆಲ್ಲ ಇದು ಹಳ್ಳವಾಗಿ ಮಾರ್ಪಾಡಾಗುತ್ತದೆ. ವಾಹನ ಸವಾರರು ಗುಂಡಿಗೆ ಬಿದ್ದು ಗಾಯ ಮಾಡಿಕೊಂಡ ನಿದರ್ಶನಗಳೂ ಸಾಕಷ್ಟಿವೆ. ಹೀಗಿದ್ದರೂ ರಸ್ತೆಯನ್ನು ದುರಸ್ತಿಪಡಿಸುವ ಕೆಲಸ ಆಗಿಲ್ಲ.
ಈ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡುವಂತೆಸ್ಥಳೀಯರು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಹೀಗಿದ್ದರೂ ಸಮಸ್ಯೆ ಬಗೆಹರಿದಿಲ್ಲ. ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಹಾಗೂ ಸಚಿವ ಮುನಿರತ್ನ ಅವರೂ ಇತ್ತ ತಿರುಗಿ ನೋಡಿಲ್ಲ. ಶಾಸಕರು ಹಾಗೂ ಅಧಿಕಾರಿಗಳ ಅಸಡ್ಡೆ
ಯಿಂದ ಸಾರ್ವಜನಿಕರು ಪರಿತಪಿಸುವಂತಾಗಿದೆ.
‘ಮಳೆ ಸುರಿದರೆ ಗುಂಡಿಗಳಲ್ಲೆಲ್ಲಾ ನೀರು ಸಂಗ್ರಹವಾಗುತ್ತದೆ. ರಾತ್ರಿ ವೇಳೆ ಈ ಮಾರ್ಗದಲ್ಲಿ ಸಾಗುವುದೇ ಸವಾಲಾಗಿದೆ. ದ್ವಿಚಕ್ರ ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಗುಂಡಿಗಳನ್ನು ಮುಚ್ಚುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆರು ತಿಂಗಳಿಂದ ಮನವಿ ಮಾಡುತ್ತಲೇ ಇದ್ದೇವೆ. ಹೀಗಿದ್ದರೂ ಗೋಳು ತಪ್ಪಿಲ್ಲ’ ಎಂದು ಸೈಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಕಿಡಿಕಾರಿದರು.
‘ಅವ್ಯವಸ್ಥೆ ಖಂಡಿಸಿ ಅನೇಕ ಬಾರಿ ಪ್ರತಿಭಟನೆ ನಡೆಸಿದ್ದೇವೆ. ಪ್ರತಿಭಟನೆಯ ಮಾರನೇ ದಿನ ಒಂದಷ್ಟು ಜಲ್ಲಿಕಲ್ಲು ಹಾಗೂ ಮಣ್ಣು ಸುರಿದು ಹೋಗುತ್ತಾರೆ. ಮಳೆ ಬಂದರೆ ಅದೇ ದಿನ ರಾತ್ರಿಯೇ ಅವು ಕೊಚ್ಚಿಕೊಂಡು ಹೋಗುತ್ತವೆ. ಡಾಂಬರು ಹಾಕಿ ಮುಚ್ಚುವಂತೆ ಹೇಳಿದರೆ, ‘ಅದು ನಮ್ಮಿಂದ ಸಾಧ್ಯವಿಲ್ಲ, ಮೇಲಧಿಕಾರಿಗಳಿಂದ ಅನುಮತಿ ಪಡೆಯದೇ ಯಾವ ಕೆಲಸವನ್ನೂ ಮಾಡುವಂತಿಲ್ಲ’ ಎಂದು ಎಂಜಿನಿಯರ್ ಪ್ರತಿಕ್ರಿಯಿಸುತ್ತಾರೆ. ಜನಸಾಮಾನ್ಯರ ಸಮಸ್ಯೆ ಅವರಿಗೆ ಅರ್ಥವೇ ಆಗುವುದಿಲ್ಲ. ಇನ್ನೆಷ್ಟು ಮಂದಿ ಈ ಗುಂಡಿಗಳಲ್ಲಿ ಬಿದ್ದು ಕೈ ಕಾಲು ಮುರಿದುಕೊಳ್ಳಬೇಕು’ ಎಂದು ಪ್ರಶ್ನಿಸಿದರು.
‘ಈ ರಸ್ತೆಯಲ್ಲಿ ಲಘು ಹಾಗೂ ಭಾರಿ ವಾಹನಗಳು ನಿರಂತರವಾಗಿ ಸಂಚರಿಸುತ್ತಲೇ ಇರುತ್ತವೆ. ದ್ವಿಚಕ್ರವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ಓಡಾಡುತ್ತವೆ. ಹೀಗಾಗಿ ಸಂಜೆ ವೇಳೆಯಲ್ಲಿ ದಟ್ಟಣೆ ಉಂಟಾಗುತ್ತದೆ. ಒಮ್ಮೊಮ್ಮೆ ಈ ದಟ್ಟಣೆಯಲ್ಲಿ ಆಂಬುಲೆನ್ಸ್ಗಳೂ ಸಿಲುಕಿಕೊಂಡು ರೋಗಿಗಳು ಸಂಕಷ್ಟ ಅನುಭವಿಸಬೇಕಾಗುತ್ತದೆ. ಬೇಸಿಗೆಯಲ್ಲಿ ರಸ್ತೆಯ ಮೇಲಿನ ದೂಳೆಲ್ಲಾ ಅಂಗಡಿಯೊಳಗೆ ಸೇರಿಕೊಳ್ಳುತ್ತದೆ. ಉಸಿರಾಡುವುದಕ್ಕೂ ಸಮಸ್ಯೆಯಾಗುತ್ತದೆ. ಅಂಗಡಿಯ ಮುಂದಿಟ್ಟಿರುವ ಪಾತ್ರೆಗಳ ಮೇಲೂ ದೂಳು ಕುಳಿತಿರುತ್ತದೆ. ಅದನ್ನು ಕೊಡವಿ ಕೊಡವಿ ಸಾಕಾಗಿ ಹೋಗುತ್ತದೆ’ ಎಂದು ಪಾತ್ರೆ ವ್ಯಾಪಾರಿ ಶ್ರೀನಿವಾಸ್ ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.