ಬೆಂಗಳೂರು: ನಗರದ ಪ್ರತಿಷ್ಠಿತ ಭಾರತೀಯ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ (ಐಐಎಂಬಿ) ಈ ಶೈಕ್ಷಣಿಕ ವರ್ಷದಿಂದಲೇ ಅನ್ವಯವಾಗುವಂತೆ ಆರ್ಥಿಕವಾಗಿ ಹಿಂದುಳಿದ ವರ್ಗಗದವರಿಗೆ (ಇಡಬ್ಲ್ಯುಎಸ್) ನೀಡುವ ಶೇ 10ರಷ್ಟು ಮೀಸಲಾತಿಯನ್ನು ಜಾರಿಗೆ ತರಲಾಗಿದೆ.
ಐಐಎಂಬಿಗೆ ಈಚೆಗ ಪ್ರವೇಶಾತಿ ಕೊನೆಗೊಂಡಿದ್ದು, ತರಗತಿಗಳೂ ಆರಂಭವಾಗಿವೆ. ಇಲ್ಲಿ ಶೇ 10ರಷ್ಟು ಮೀಸಲಾತಿ ಕಲ್ಪಿಸಿಯೇ ಪ್ರವೇಶಾತಿ ನಡೆದಿದೆ. ಹೀಗಾಗಿ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುವಂತಾಗಿದೆ.
‘ಮೀಸಲಾತಿಯನ್ನು ಹಂತ ಹಂತವಾಗಿ ಜಾರಿಗೆ ತರಬೇಕಾಗಿದೆ. ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಹಜವಾಗಿ ಹೆಚ್ಚುವುದರಿಂದ ಮೂಲಸೌಲಭ್ಯ ಹೆಚ್ಚಿಸಬೇಕು, ಬೋಧಕರ ಸಂಖ್ಯೆಯನ್ನೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುವ ಅಗತ್ಯವಿದೆ’ ಎಂದು ಐಐಎಂಬಿನಿರ್ದೇಶಕ ಪ್ರೊ.ಜಿ.ರಘುರಾಂ ಹೇಳಿದರು.
‘ಈ ವರ್ಷ ಇಡಬ್ಲ್ಯುಎಸ್ ಕೋಟಾ ಅಡಿಯಲ್ಲಿ 10 ಮಂದಿಗೆ ಪ್ರವೇಶ ನೀಡಲಾಗಿದೆ. ಆದರೆ ಎಕ್ಸಿಕ್ಯೂಟಿವ್ ಎಂಬಿಎ ಪ್ರೋಗ್ರಾಂನಲ್ಲಿ ಈ ಕೋಟಾವನ್ನು ಹೇಗೆ ಜಾರಿಗೆ ತರಬಹುದು ಎಂಬುದರ ಬಗ್ಗೆ ಇನ್ನಷ್ಟು ಚಿಂತನೆ ನಡೆಸುವ ಅಗತ್ಯ ಇದೆ. ಏಕೆಂದರೆ ಹೀಗೆ ಬರುವ ಅಭ್ಯರ್ಥಿಗಳು ಈಗಾಗಲೇ ಕೆಲಸದ ಅನುಭವ ಹೊಂದಿರುವವರು ಮತ್ತು ಅಧಿಕ ಸಂಬಳ ಪಡೆಯುವವರು’ ಎಂದು ನಿರ್ದೇಶಕರು ತಿಳಿಸಿದರು.
ಈ ಮಧ್ಯೆ, ಐಐಎಂಬಿಯಲ್ಲಿ ಮುಂದಿನ ವರ್ಷ ಬಿಸಿನೆಸ್ ಅನಲಿಟಿಕ್ಸ್ನಲ್ಲಿ ಎಂಬಿಎ ಪ್ರೋಗ್ರಾಂ ಆರಂಭವಾಗಲಿದೆ. 40 ಮಂದಿಗೆ ಪ್ರವೇಶಕ್ಕೆ ಅವಕಾಶ ಇದ್ದು, ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಎಟಿ) ಮೂಲಕ ಸೀಟುಗಳನ್ನು ಭರ್ತಿ ಮಾಡಲಾಗುವುದು ಎಂದು ಅವರು ಹೇಳಿದರು.