ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಿಂದ ವಿಮಾನ ನಿಲ್ದಾಣ ತಲುಪಲು ಮೂವತ್ತೇ ನಿಮಿಷ

ಬ್ರಾಂಡ್ ಬೆಂಗಳೂರು, ದಾರಿ ಹತ್ತಾರು | ಉದ್ಘಾಟನೆಗೆ ಸಜ್ಜಾಗಿದೆ ಏರ್‌ಪೋರ್ಟ್‌ ಬಳಿಯ ರೈಲು ನಿಲುಗಡೆ ತಾಣ
Last Updated 27 ಸೆಪ್ಟೆಂಬರ್ 2020, 21:17 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ವಿಮಾನಯಾನಕ್ಕಿಂತ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡುವುದೇ ಕಷ್ಟ ಮತ್ತು ದುಬಾರಿ ಎನಿಸಿರುವ ಸಂದರ್ಭದಲ್ಲಿ ₹30 ದರದಲ್ಲಿ, 30 ನಿಮಿಷದಲ್ಲಿ ಪ್ರಯಾಣಿಸಬಹುದಾದ ದಾರಿಯೊಂದು ತೆರೆದುಕೊಂಡಿದೆ. ವಿಮಾನ ನಿಲ್ದಾಣ ಮಗ್ಗಲಿನಲ್ಲೇ ರೈಲು ನಿಲುಗಡೆಗೆಸುಸಜ್ಜಿತ ತಾಣ ನಿರ್ಮಾಣವಾಗಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.

ದೇವನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿ ‌ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ನಂತರ ಈ ರಸ್ತೆಯಲ್ಲಿ ಸಂಚಾರದ ದಟ್ಟಣೆ ಬಗೆಹರಿಯದ ಸಮಸ್ಯೆಯಾಗಿದೆ. ವಿಮಾನ ಪ್ರಯಾಣಿಕರಲ್ಲದೇ ನಿಲ್ದಾಣ ಮತ್ತು ಕಾರ್ಗೊ ಟರ್ಮಿನಲ್‌ನಲ್ಲಿ ಕೆಲಸ ಮಾಡುವ ಜನ ಸೇರಿ ನಿತ್ಯ ಸರಾಸರಿ 1.30 ಲಕ್ಷ ಜನ ನಗರದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಾರೆ. ಇವರೆಲ್ಲರೂ ಮೆಜೆಸ್ಟಿಕ್‌ನಿಂದ ವಿಮಾನ ನಿಲ್ದಾಣ ತಲುಪಲು ಗಂಟೆಗಟ್ಟಲೆ ಪ್ರಯಾಣಿಸುವುದು ಅನಿವಾರ್ಯವಾಗಿದೆ.

ಈ ನಡುವೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮತ್ತೊಂದು ರನ್‌ವೇ ಸಿದ್ಧಗೊಳ್ಳುತ್ತಿದೆ. ಇಲ್ಲಿಗೆ ಬಂದು ಹೋಗುವ ವಿಮಾನಗಳ ಸಂಖ್ಯೆ, ಪ್ರಯಾಣಿಕರ ಸಂಖ್ಯೆ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಾಗಲಿವೆ. ಆದರೆ, ಸಂಚಾರ ದಟ್ಟಣೆ ಸೀಳಿಕೊಂಡು ಬೆಂಗಳೂರಿನಿಂದ ವಿಮಾನ ನಿಲ್ದಾಣ ತಲುಪುವುದೇ ಸಾಹಸದ ಕೆಲಸ. ಬಿಎಂಟಿಸಿ ಬಸ್ ಅಥವಾ ಕ್ಯಾಬ್‌ಗಳಲ್ಲಿ ದುಬಾರಿ ದರ ಪಾವತಿಸಿ ಪ್ರಯಾಣಿಸಬೇಕಾದ ಸ್ಥಿತಿ ಇದೆ.

ಸದ್ಯ ವಿಮಾಣ ನಿಲ್ದಾಣ ತಲುಪಲು ರಸ್ತೆಯಲ್ಲಿ ವಾಹನದಲ್ಲಿ ಸಾಗುವುದು ಬಿಟ್ಟರೆ ಬೇರೆ ಮಾರ್ಗ ಇಲ್ಲ. ಮೆಟ್ರೊ ರೈಲು ಮತ್ತು ಉಪನಗರ ರೈಲು ಮಾರ್ಗದ ಯೋಜನೆಗಳು ಇನ್ನೂ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾದಿವೆ. ಅನುಮತಿ ದೊರೆತರೂ ಕಾಮಗಾರಿ ಆರಂಭವಾದರೂ ಪೂರ್ಣಗೊಳ್ಳಲು ಕನಿಷ್ಠ ಐದಾರು ವರ್ಷಬೇಕು.

ಬೆಂಗಳೂರಿನಿಂದ ಯಲಹಂಕ, ದೇವನಹಳ್ಳಿ ಕಡೆಗೆ ಹೋಗುವ ರೈಲು ಮಾರ್ಗ ವಿಮಾನ ನಿಲ್ದಾಣದ ಕಾಂಪೌಂಡ್ ಪಕ್ಕದಲ್ಲೇ ಹಾದು ಹೋಗಿದೆ. ಇಲ್ಲಿ ರೈಲು ನಿಲುಗಡೆ ತಾಣ ನಿರ್ಮಿಸಿದರೆಕಡಿಮೆ ಖರ್ಚಿನಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಪರ್ಯಾಯ ಮಾರ್ಗವೊಂದು ದೊರಕಿದಂತೆ ಆಗಲಿದೆ ಎಂಬ ಕೂಗು ರೈಲ್ವೆ ಹೋರಾಟಗಾರರು ಮತ್ತು ಪ್ರಯಾಣಿಕರಿಂದ ಆರಂಭವಾಯಿತು.

ಇದಕ್ಕೆ ಸ್ಪಂದಿಸಿದಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು(ಬಿಐಎಎಲ್‌), ರೈಲ್ವೆ ಇಲಾಖೆ ಜತೆ ಒಡಂಬಡಿಕೆ ಮಾಡಿಕೊಂಡು₹3 ಕೋಟಿ ವೆಚ್ಚದಲ್ಲಿ ರೈಲು ನಿಲುಗಡೆ ತಾಣ ನಿರ್ಮಿಸಿದೆ.

ಈ ನಿಲ್ದಾಣವು ಸಾಮಾನ್ಯ ರೈಲು ನಿಲ್ದಾಣಗಳಂತೆ ಇಲ್ಲ. ಹೊಸ ವಿನ್ಯಾಸದೊಂದಿಗೆ ಆಕರ್ಷಕ ರೆಸಾರ್ಟ್‌ ಮಾದರಿಯಲ್ಲಿದೆ. ರೈಲಿನಲ್ಲಿ ಬಂದಿಳಿಯುವ ಪ್ರಯಾಣಿಕರಿಗೆ ಶೌಚಾಲಯ, ಕಾಫಿ, ಸ್ನ್ಯಾಕ್ಸ್ ಕೂಡ ಇಲ್ಲಿ ದೊರೆಯಲಿದೆ. ರೈಲು ನಿಲುಗಡೆ ತಾಣಕ್ಕೆ ಸುಣ್ಣ, ಬಣ್ಣ ಬಳಿಯುವ ಕೆಲಸವೂ ಪೂರ್ಣಗೊಂಡಿದೆ.

‘ಕಾಮಗಾರಿ ಪೂರ್ಣಗೊಂಡಿದ್ದು, ಅಕ್ಟೋಬರ್‌ ಮೊದಲ ವಾರದಲ್ಲಿ ನಿಲುಗಡೆ ತಾಣ ಉದ್ಘಾಟನೆ ಮಾಡಲು ಚಿಂತಿಸಲಾಗಿದೆ. ಲಾಕ್‌ಡೌನ್ ನಂತರ ಸಾಮಾನ್ಯ ರೈಲುಗಳ ಸಂಚಾರ ಪುನರಾರಂಭವಾಗಿಲ್ಲ. ಆರಂಭವಾದ ಕೂಡಲೇ ಈ ನಿಲುಗಡೆ ತಾಣಕ್ಕೆ ಪೂರ್ಣ ಪ್ರಮಾಣದಲ್ಲಿ ಚಾಲನೆ ಸಿಗಲಿದೆ’ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯಾ ಹೇಳಿದರು.

ಅಗ್ಗದ ಪ್ರಯಾಣ

ದೇವನಹಳ್ಳಿ ಮತ್ತು ದೊಡ್ಡಜಾಲ ನಡುವೆ ಇರುವ ಈ ರೈಲು ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲು ನಿಲ್ದಾಣದಿಂದ ಕೇವಲ ₹30 ಪ್ರಯಾಣ ದರದಲ್ಲೇ 30ರಿಂದ 35 ನಿಮಿಷದಲ್ಲಿ ಪ್ರಯಾಣ ಮಾಡಬಹುದು.

ವಿಮಾನ ಪ್ರಯಾಣಿಕರು ಮತ್ತು ನಿಲ್ದಾಣ ಉದ್ಯೋಗಿಗಳು ಬಿಎಂಟಿಸಿ ಬಸ್ ಮತ್ತು ದುಬಾರಿ ವೆಚ್ಚದ ಕ್ಯಾಬ್‌ಗಳನ್ನು ಅವಲಂಬಿಸಿದ್ದಾರೆ. ಮೆಜೆಸ್ಟಿಕ್‌ನಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಬಿಎಂಟಿಸಿ ವಜ್ರವಾಯು ಬಸ್‌ ಪ್ರಯಾಣ ದರ ₹235 ಇದೆ. ಕನಿಷ್ಠ ಒಂದು ಗಂಟೆಯಾದರೂ ಸಮಯ ಬೇಕಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೂ ಹೊಸ ರೈಲು ನಿಲ್ದಾಣ ಪರಿಹಾರ ನೀಡಲಿದೆ.

‘ಈ ಮಾರ್ಗದಲ್ಲಿ ಸದ್ಯ ಸಂಚರಿಸುತ್ತಿರುವ ಎಲ್ಲಾ 6 ರೈಲುಗಳ ನಿಲುಗಡೆಗೂ ಅವಕಾಶ ನೀಡಲಾಗುವುದು. ಜನರ ಪ್ರತಿಕ್ರಿಯೆ ಆಧರಿಸಿ ರೈಲುಗಳ ಸಂಖ್ಯೆ ಹೆಚ್ಚಿಸಲಾಗುವುದು’ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದರು.

ಉಚಿತ ಬಸ್ ವ್ಯವಸ್ಥೆ

ರೈಲು ನಿಲ್ದಾಣಕ್ಕೆ ಬಂದಿಳಿಯುವ ವಿಮಾನ ಪ್ರಯಾಣಿಕರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಲು ಬಿಐಎಎಲ್‌ ಸಿದ್ಧತೆ ಮಾಡಿಕೊಂಡಿದೆ. ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ 10 ನಿಮಿಷದೊಳಗೆ ಪ್ರಯಾಣಿಬಹುದು.

ಮತ್ತೊಂದು ಕ್ರಾಸಿಂಗ್ ನಿಲ್ದಾಣ

ದೊಡ್ಡಜಾಲ ಬಳಿ ರೈಲ್ವೆ ಕ್ರಾಸಿಂಗ್ ನಿಲ್ದಾಣವೊಂದನ್ನು ನಿರ್ಮಿಸುವ ಪ್ರಸ್ತಾವನೆಯನ್ನು ರೈಲ್ವೆ ಇಲಾಖೆ ಹೊಂದಿದೆ. ಇದು ಸಾಕಾರಗೊಂಡರೆ ವಿಮಾನ ನಿಲ್ದಾಣಕ್ಕೆ ಹೆಚ್ಚು ರೈಲುಗಳ ಸಂಚಾರಕ್ಕೆ ಅನುಕೂಲವಾಗಲಿದೆ.

ಸದ್ಯ ಯಲಹಂಕ ಅಥವಾ ದೇವನಹಳ್ಳಿಯಲ್ಲಿ ರೈಲುಗಳ ಕ್ರಾಸಿಂಗ್‌ಗೆ ಅವಕಾಶ ಇದೆ. ನಡುವಿನ 35 ಕಿಲೋ ಮೀಟರ್ ಅಂತರದಲ್ಲಿ ಕ್ರಾಸಿಂಗ್‌ಗೆ ವ್ಯವಸ್ಥೆ ಇಲ್ಲ. ದೊಡ್ಡಜಾಲ ಬಳಿ ₹10 ಕೋಟಿ ಮೊತ್ತದಲ್ಲಿ ರೈಲ್ವೆ ಕ್ರಾಸಿಂಗ್ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವ ಆಲೋಚನೆ ಇದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.

ದೇವನಹಳ್ಳಿ ತನಕ ರೈಲ್ವೆ ಮಾರ್ಗ ವಿದ್ಯುದೀಕರಣ ಕಾಮಗಾರಿಗೂ ಟೆಂಡರ್ ಕರೆಯಲಾಗಿದೆ. ಈ ಎರಡೂ ಕಾಮಗಾರಿ ಪೂರ್ಣಗೊಂಡರೆ ಈಗಿರುವ 8 ರೈಲುಗಳ ಬದಲಿಗೆ 16 ರೈಲುಗಳನ್ನು ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಬಹುದು ಎಂದು ಹೇಳಿದರು.

ಮೆಟ್ರೊ ಇನ್ನೂ ದೂರ

ವಿಮಾನ ನಿಲ್ದಾಣಕ್ಕೆ ಮೆಟ್ರೊ ರೈಲು ಮಾರ್ಗ ವಿಮಾನ ನಿಲ್ದಾಣ ತಲುಪಿಸುವ ಪ್ರಸ್ತಾವಿತ ಯೋಜನೆಯ ಕಾರ್ಯಸಾಧ್ಯತೆಯನ್ನು ಕೇಂದ್ರ ಸರ್ಕಾರ ಇನ್ನೂ ಪರಿಶೀಲಿಸುತ್ತಿದ್ದು, ಯೋಜನೆ ಪೂರ್ಣಗೊಳ್ಳುವುದು ಇನ್ನೂ ದೂರದ ಮಾತು.

‘ಕಾರ್ಯಸಾಧ್ಯತೆ ಪರಿಶೀಲಿಸಿ ಆರ್ಥಿಕ ಅನುಮೋದನೆ ನೀಡಲಾಗುವುದು ಕೇಂದ್ರದ ನಗರಾಭಿವೃದ್ಧಿ ಸಚಿವರು ಹೇಳಿದ್ದಾರೆ. ಹೀಗಾಗಿ ಯೋಜನೆ ವಿಳಂಬವಾಗುವ ಸಾಧ್ಯತೆ ಇದೆ. ದೊಡ್ಡಜಾಲ ಬಳಿ ರೈಲ್ವೆ ಕ್ರಾಸಿಂಗ್ ನಿಲ್ದಾಣ ಮತ್ತು ವಿದ್ಯುದ್ದೀಕರಣ ಯೋಜನೆ ಪೂರ್ಣಗೊಂಡರೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರಿಗೆ ಅನುಕೂಲ ಆಗಲಿದೆ’ ಎಂದು ರೈಲ್ವೆ ಹೋರಾಟಗಾರ ಸಂಜೀವ್ ದ್ಯಾಮಣ್ಣನವರ್‌ ಹೇಳಿದರು.

ರೈಲು ಮಾರ್ಗವೇ ಸದ್ಯದ ಪರಿಹಾರ

ಮೆಟ್ರೊ ಮತ್ತು ಉಪನಗರ ರೈಲು ಮಾರ್ಗ ವಿಮಾನ ನಿಲ್ದಾಣ ತಲುಪಲು ಕನಿಷ್ಠ ಐದಾರು ವರ್ಷ ಬೇಕು. ರಸ್ತೆ ಮಾರ್ಗದ ಮೇಲಿನ ಪ್ರಯಾಣದ ದಟ್ಟಣೆ ಕಡಿಮೆ ಮಾಡಲು ರೈಲು ಮಾರ್ಗವೇ ಪರಿಹಾರ ಎಂದು ರೈಲ್ವೆ ಹೋರಾಟಗಾರ ರಾಜಕುಮಾರ್ ದುಗ್ಗಾರ್ ಹೇಳಿದರು.

ಮೆಜೆಸ್ಟಿಕ್‌– ಯಶವಂತಪುರ–ಯಲಹಂಕ ಮಾರ್ಗ, ಕಂಟೋನ್ಮೆಂಟ್‌–ಬೈಯಪ್ಪನಹಳ್ಳಿ–ಚನ್ನಸಂದ್ರ–ಯಲಹಂಕ ಮಾರ್ಗದಲ್ಲೂ ವಿಮಾನ ನಿಲ್ದಾಣ ತಲುಪಬಹುದು.

‘ಯಲಹಂಕದಿಂದ ದೇವನಹಳ್ಳಿ ನಡುವೆ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡರೆ ಮೆಮು ರೈಲುಗಳ ಸಂಚಾರಕ್ಕೆ ಅನುಕೂಲ ಆಗಲಿದೆ. ಮೈಸೂರು, ಕೆಂಗೇರಿ, ತುಮಕೂರು, ದೊಡ್ಡಬಳ್ಳಾಪುರ, ಹೊಸೂರು ಕಡೆಯಿಂದಲೂ ವಿಮಾನ ನಿಲ್ದಾಣಕ್ಕೆ ಮೆಮು ರೈಲುಗಳ ಸಂಚಾರ ಆರಂಭಿಸಬಹುದು’ ಎಂದರು.

‘ಯಲಹಂಕದಿಂದ ದೇವನಹಳ್ಳಿ ನಡುವೆ ದೊಡ್ಡಜಾಲದಲ್ಲಿ ರೈಲ್ವೆ ಕ್ರಾಸಿಂಗ್ ಸ್ಟೇಷನ್‌ ನಿರ್ಮಿಸಬೇಕು. ವಿಮಾನ ನಿಲ್ದಾಣಕ್ಕೆ ಮಾತ್ರವಲ್ಲದೇ ಸುತ್ತಮುತ್ತಲ ಜನರಿಗೂ ಅನುಕೂಲ ಆಗುವಂತೆ ರೈಲು ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿಗೆ 300 ಮೀಟರ್‌ ಉದ್ದದ ರಸ್ತೆ ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಎರಡೂ ಮಾರ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಓಡಾಡುವ ರೈಲುಗಳ ಸಂಖ್ಯೆ ಹೆಚ್ಚಾದರೆ ಸ್ಥಳೀಯ ಪ್ರಯಾಣಿಕರಿಗೂ ಅನುಕೂಲ ಆಗಲಿದೆ’ ಎಂದರು.

ಆಗಬೇಕಿರುವ ಪ್ರಮುಖ ಕೆಲಸಗಳು

* ದೊಡ್ಡಜಾಲ ಬಳಿ ರೈಲ್ವೆ ಕ್ರಾಸಿಂಗ್ ಸ್ಟೇಷನ್

* ಯಲಹಂಕ–ದೇವನಹಳ್ಳಿ ನಡುವೆ ವಿದ್ಯುದ್ದೀಕರಣ

* ಸಾಧ್ಯ ಇರುವ ಎಲ್ಲಾ ಕಡೆಯಿಂದ ರೈಲುಗಳ ಕಾರ್ಯಾಚರಣೆ ಹೆಚ್ಚಿಸಬೇಕು

* ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿಗೆ 300 ಮೀಟರ್ ಉದ್ದದ ರಸ್ತೆ ಅಭಿವೃದ್ಧಿ

ಮಾರ್ಗ–1

ಕೆಎಸ್‌ಆರ್‌ ರೈಲು ನಿಲ್ದಾಣ

ಮಲ್ಲೇಶ್ವರ

ಯಶವಂತಪುರ

ಲೊಟ್ಟೆಗೊಲ್ಲಹಳ್ಳಿ

ಕೊಡಿಗೆಹಳ್ಳಿ

ಯಲಹಂಕ

ಬೆಟ್ಟಹಲಸೂರು

ದೊಡ್ಡಜಾಲ

ವಿಮಾನ ನಿಲ್ದಾಣ

ಮಾರ್ಗ–2

ಕಂಟೋನ್ಮೆಂಟ್

ಬೆಂಗಳೂರು ಪೂರ್ವ

ಬೈಯಪ್ಪನಹಳ್ಳಿ

ಚನ್ನಸಂದ್ರ

ಯಲಹಂಕ

ಬೆಟ್ಟಹಲಸೂರು

ದೊಡ್ಡಜಾಲ

ವಿಮಾನ ನಿಲ್ದಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT