ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದಿಂದ ಹೆಚ್ಚಾಯಿತು ಕಸ-ವಿಲೇವಾರಿಗೆ ಮಳೆ ಅಡ್ಡಿ

Last Updated 16 ಅಕ್ಟೋಬರ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದಿಂದ ನಗರದಲ್ಲಿ ಕಸದ ಪ್ರಮಾಣ ಶೇ 35ರಷ್ಟು ಹೆಚ್ಚಾಗಿದೆ. ನಾಲ್ಕೈದು ದಿನಗಳಿಂದ ಸತತ ಮಳೆ ಸುರಿಯುತ್ತಿರುವುದರಿಂದ ಕಸ ವಿಲೇವಾರಿಯೂ ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ.

ಹಬ್ಬಗಳ ಸಲುವಾಗಿ ನಗರದ ಮಾರುಕಟ್ಟೆಗಳಿಗೆ ಬಾಳೆ ಕಂದು, ಹೂವು ಹಾಗೂ ಕುಂಬಳಕಾಯಿಗಳನ್ನು ವ್ಯಾಪಾರಿಗಳು ಭಾರಿ ಪ್ರಮಾಣದಲ್ಲಿ ತಂದಿದ್ದರು. ಕೋವಿಡ್‌ನಿಂದಾಗಿ ವ್ಯಾಪಾರ ನಿರೀಕ್ಷಿತ ಪ್ರಮಾಣದಲ್ಲಿ ಆಗಿರಲಿಲ್ಲ. ಹಾಗಾಗಿ, ಅನೇಕ ವ್ಯಾಪಾರಿಗಳು ಬಾಳೆ ಕಂದು, ಕುಂಬಳಕಾಯಿ ಹಾಗೂ ಹೂವುಗಳನ್ನೆಲ್ಲ ಮಾರುಕಟ್ಟೆಯ ಬಳಿಯೇ ರಾಶಿ ಹಾಕಿ ತೆರಳಿದ್ದರು. ಕೆ.ಆರ್‌.ಮಾರುಕಟ್ಟೆ, ಕಲಾಸಿಪಾಳ್ಯ ಸಗಟು ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ, ಯಶವಂತಪುರ, ಯಲಹಂಕದ ರೈತರ ಸಂತೆ ಬಳಿ ಕಸದ ರಾಶಿಯೇ ಕಂಡು ಬಂತು.

ಭಕ್ತರು ಮನೆಗಳಲ್ಲಿ ದೇವರ ಪೂಜೆಗೆ ಬಳಸಿದ್ದ ಬಾಳೆ ಕಂದು ಹಾಗೂ ಹೂವುಗಳ ಕಸವೂ ಹೆಚ್ಚುವರಿಯಾಗಿ ಸೇರಿಕೊಂಡಿದ್ದರಿಂದ ನಗರದಲ್ಲಿಉತ್ಪತ್ತಿಯಾಗುವ ಹಸಿ ಕಸದಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿತ್ತು.

‘ನಿತ್ಯ 4 ಸಾವಿರ ಟನ್‌ಗಳಷ್ಟು ಹಸಿ ಕಸ ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುತ್ತದೆ. ಆದರೆ, ಎರಡು ದಿನಗಳಿಂದ ನಿತ್ಯ 5,200 ಟನ್‌ಗಳಷ್ಟು ಕಸ ಉತ್ಪತ್ತಿಯಾಗಿದೆ. ಅವುಗಳನ್ನು ವಿಲೇ ಮಾಡುವುದಕ್ಕೆ ಸ್ವಚ್ಛತಾ ಸಿಬ್ಬಂದಿ ಎರಡು ಪಾಳಿಗಳಲ್ಲಿ ಕೆಲಸ ಮಾಡಬೇಕಾಯಿತು’ ಎಂದು ಬಿಬಿಎಂಪಿ ಜಂಟಿ ಆಯುಕ್ತ (ಕಸ ನಿರ್ವಹಣೆ) ಸರ್ಫರಾಜ್‌ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆ ಬಂದಿದ್ದರಿಂದ ಕಸ ಸಂಗ್ರಹಕ್ಕೂ ಸಮಸ್ಯೆಯಾಗಿದೆ. ಭೂಭರ್ತಿ ಕೇಂದ್ರಗಳಿಗೆ ಕಸ ಸಾಗಿಸುವ ವಾಹನಗಳು ಕಚ್ಚಾ ರಸ್ತೆಯಲ್ಲೇ ಸಾಗಬೇಕು. ಮಳೆಯಿಂದಾಗಿ ಈ ರಸ್ತೆಗಳು ಕೆಸರುಮಯವಾಗಿದ್ದರಿಂದ ವಾಹನಗಳು ಸ್ಥಳವನ್ನು ತಲುಪುವುದಕ್ಕೆ ಹಾಗೂ ಕಸವನ್ನು ವಾಹನಗಳಿಂದ ಇಳಿಸುವುದಕ್ಕೆ ಸಮಸ್ಯೆಯಾಯಿತು. ಸಾಮಾನ್ಯವಾಗಿ ನಿತ್ಯ 300 ಲೋಡ್‌ಗಳಷ್ಟು ಕಸ ಭೂಭರ್ತಿಕೇಂದ್ರವನ್ನು ತಲುಪುತ್ತದೆ. ಶುಕ್ರವಾರ 500 ಲೋಡ್‌ಗಳಷ್ಟು ಕಸವನ್ನು ಸಾಗಿಸಿದ್ದೇವೆ. ಶನಿವಾರ ರಾತ್ರಿವರೆಗೆ 350 ಲೋಡ್‌ಗಳಷ್ಟು ಕಸ ವಿಲೇ ಮಾಡಿದ್ದೇವೆ. ಕಸ ವಿಲೇವಾರಿ ರಾತ್ರಿಯೂ ಮುಂದುವರಿದಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT