ಬೆಂಗಳೂರು: ವಿಶ್ವದಲ್ಲಿ ಹೆಚ್ಚುತ್ತಿರುವ ಅಶಾಂತಿ, ಹಿಂಸೆಗೆ ಭಾರತೀಯ ಪುರಾತನ ಜ್ಞಾನವೇ ಮದ್ದು ಎಂದು ಬೌದ್ಧ ಧರ್ಮಗುರು ದಲೈಲಾಮಾ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ, ವಿದ್ಯಾಲೋಕ್ ಆಫ್ ವನ ಫೌಂಡೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶಾಂತಿ, ಕರುಣೆ, ಸಹನೆ, ಮಾನಸಿಕ ದೃಢತೆ ಇವು ಭಾರತೀಯ ಜ್ಞಾನ ಪರಂಪರೆಯ ಭಾಗ. ಬುದ್ಧ ಅದನ್ನು ಪುನರುಜ್ಜೀವನಗೊಳಿಸಿ ಉಪದೇಶ ಮಾಡಿದ. ಆ ಜ್ಞಾನ ಪರಂಪರೆ ಇಂದಿನ ಅಗತ್ಯವಾಗಿದೆ’ ಎಂದು ಪ್ರತಿಪಾದಿಸಿದರು.
‘ಜ್ಞಾನದ ಪುನರುಜ್ಜೀವನ ಭಾರತದಲ್ಲಿಯೇ ಆಗಬೇಕು. ವಿಶ್ವ ಶಾಂತಿಗೆ ಇಲ್ಲಿಯ ಪುರಾತನ ಜ್ಞಾನದ ಬಳಕೆ ಆಗಬೇಕು’ ಎಂದು ಅವರು ಹೇಳಿದರು.
‘ಬೌದ್ಧ ಧರ್ಮ ಟಿಬೆಟ್ಗೆ ಕಾಲಿಡುವುದಕ್ಕೆ ಮೊದಲು ಅಲ್ಲಿ ಅಜ್ಞಾನದ ಕತ್ತಲೆ ನೆಲೆಸಿತ್ತು. ಬುದ್ಧನ ಜ್ಞಾನ ಮಾರ್ಗದಿಂದ ಬೆಳಕು ಹರಡಿತು.ಭಾರತದಲ್ಲಿಯೂ ಶಾಂತಿ, ಸೌಹಾರ್ದ ನೆಲೆಸಿದೆ. ದೆಹಲಿಯಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸಿ ವಿದ್ವಾಂಸರನ್ನು ಕರೆಸಿ ಮಾತುಕತೆಗೆ ಚಾಲನೆ ನೀಡಲಾಗುವುದು. ಇದಕ್ಕೆ ವಿಶ್ವಮಟ್ಟದ ಇಸ್ಲಾಮಿಕ್ ವಿದ್ವಾಂಸರನ್ನು ಕರೆಸಲಾಗುವುದು’ ಎಂದರು.