ಬೆಂಗಳೂರು: ಆಂಧ್ರಪ್ರದೇಶದ ಈಸ್ಟ್ ಗೋದಾವರಿ ಜಿಲ್ಲೆಯಿಂದ ಗಾಂಜಾವನ್ನು ತಂದು ಅಂತರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ₹1 ಕೋಟಿ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
‘ಗಾಂಜಾ ಮಾರಾಟ ಆರೋಪದಡಿ ಮೈಸೂರಿನ ಕೆ.ಆರ್.ಪುರದ ಸಮೀರ್ (37), ಕೈಸರ್ ಪಾಷಾ (41) ಹಾಗೂ ಚಿಕ್ಕಬಳ್ಳಾಪುರದ ಇಸ್ಮಾಯಿಲ್ ಶರೀಫ್ (38) ಬಂಧಿತರು. ಇವರು ಹಲವು ವರ್ಷಗಳಿಂದ ಗಾಂಜಾ ಮಾರಾಟ ಹಾಗೂ ಸರಬರಾಜಿನಲ್ಲಿ ತೊಡಗಿದ್ದರು’ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.
‘ಆರೋಪಿ ಸಮೀರ್, ಚಾಲಕನಾಗಿದ್ದಾನೆ. ಈಸ್ಟ್ ಗೋದಾವರಿ ಜಿಲ್ಲೆಯಿಂದ ಕಂಟೈನರ್ ಲಾರಿಯಲ್ಲಿ ಗಾಂಜಾ ಸಾಗಣೆ ಮಾಡುವ ಜವಾಬ್ದಾರಿಯನ್ನು ಆತನೇ ವಹಿಸಿಕೊಂಡಿದ್ದ. ಸಹಚರರಾದ ಕೈಸರ್ ಪಾಷಾ ಹಾಗೂ ಇಸ್ಮಾಯಿಲ್ ಮೂಲಕ ಮಧ್ಯವರ್ತಿಗಳಿಗೆ ಗಾಂಜಾ ಮಾರಿಸುತ್ತಿದ್ದ’ಎಂದೂ ಹೇಳಿದರು.
‘ಕರ್ನಾಟಕದ ಹಲವೆಡೆ ಆರೋಪಿಗಳು ಪೆಡ್ಲರ್ ಮೂಲಕ ಗಾಂಜಾ ಮಾರಿಸುತ್ತಿದ್ದರು. ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲೂ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು’ಎಂದೂ ಕಮಲ್ ಪಂತ್ ತಿಳಿಸಿದರು.