ಬೆಂಗಳೂರು: ವರ್ಷದ ಅವಧಿಯಲ್ಲಿ ವೈಟ್ಫೀಲ್ಡ್ ವಿಭಾಗದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ₹10.36 ಕೋಟಿ ಮೌಲ್ಯದ ಕಳವು ಮಾಡಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಎಚ್ಎಎಲ್ ಪೊಲೀಸ್ ಠಾಣೆ ಎದುರಿನ ಮೈದಾನದಲ್ಲಿ ಬುಧವಾರ ನಗರ ಪೊಲೀಸ್ ಆಯುಕ್ತ ಪ್ರತಾಪ ರೆಡ್ಡಿ ಅವರು ವಶಕ್ಕೆ ಪಡೆದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು.
₹1.88 ಕೋಟಿ ಮೌಲ್ಯದ ಚಿನ್ನಾಭರಣ, 4 ಕೆ.ಜಿ. ಬೆಳ್ಳಿಯ ಸಾಮಗ್ರಿ, ₹ 24 ಲಕ್ಷ ಮೌಲ್ಯದ ವಜ್ರದ ಆಭರಣ, ₹ 1.44 ಕೋಟಿಯ ವಿವಿಧ ಕಂಪನಿಯ 700 ಮೊಬೈಲ್, ₹ 62.40 ಲಕ್ಷದ 96 ಲ್ಯಾಪ್ಟಾಪ್ಗಳು, ₹ 2.37 ಕೋಟಿಯ 313 ಬೈಕ್ಗಳನ್ನು ಒಂದು ವರ್ಷದ ಅವಧಿಯಲ್ಲಿ ವಶಕ್ಕೆ ಪಡೆಯಲಾಗಿತ್ತು. ವಾರಸುದಾರರಿಗೆ ವಿತರಣೆ ಮಾಡಲಾಯಿತು.
ಇದೇ ಅವಧಿಯಲ್ಲಿ 41 ಮಾದಕ ವಸ್ತು ಮಾರಾಟ ಪ್ರಕರಣ ಪತ್ತೆಹಚ್ಚಿ 159 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೈಟ್ಫೀಲ್ಡ್, ಕಾಡುಗೋಡಿ, ಮಹದೇವಪುರ, ಕೆ.ಆರ್.ಪುರ, ಮಾರತಹಳ್ಳಿ, ಎಚ್ಎಎಲ್, ಬೆಳ್ಳಂ ದೂರು, ವರ್ತೂರು, ವೈಟ್ಫೀಲ್ಡ್ನ ಸೈಬರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ಬೈಕ್ ಕಳವು: ಆರೋಪಿ ಬಂಧನ
ಬೆಂಗಳೂರು: ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯ ಎದುರು ನಿಲ್ಲಿಸಿದ್ದ ಬೈಕ್ ಕಳವು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಜಿಲ್ಲೆಯ ಜೋಗಮನಸಹಳ್ಳಿ ಗ್ರಾಮದ ಕೆ.ಸೂರ್ಯ (22) ಬಂಧಿತ ಆರೋಪಿ. ₹ 6 ಲಕ್ಷ ಮೌಲ್ಯದ 10 ದಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ‘ಸೂರಜ್ ಎಂಬುವರು ತಮ್ಮ ಮನೆಯ ಎದುರು ನಿಲುಗಡೆ ಮಾಡಿದ್ದ ಪಲ್ಸರ್ ಬೈಕ್ ಅನ್ನು ಆರೋಪಿ ಕಳವು ಮಾಡಿದ್ದ. ಇವರು ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿ ಆರೋಪಿ ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.