ಬೆಂಗಳೂರು: ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನ್ಯಾಯ ಕಲ್ಪಿಸಿದ ಮೇಲೆ, ಅವರದ್ದೇ ಸಚಿವ ಸಂಪುಟದಲ್ಲಿರುವ ನಾಗೇಂದ್ರ ಮೇಲಿರುವ 25ಕ್ಕೂ ಹೆಚ್ಚು ಪ್ರಕರಣಗಳನ್ನೂ ಮುಖ್ಯಮಂತ್ರಿ ವಾಪಸ್ ಪಡೆಯಬೇಕು ಅಲ್ಲವೇ’ ಎಂದು ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನೂತನ ರಾಜ್ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರು ಮಾತನಾಡಿದರು.
‘ಗಣಿಗಾರಿಕೆಗೆ ಸಂಬಂಧಿಸಿದಂತೆ ನನ್ನ ಮೇಲೆ ಐದು ಪ್ರಕರಣಗಳಿದ್ದರೆ, ನಾಗೇಂದ್ರ ಮೇಲೆ 25ಕ್ಕೂ ಹೆಚ್ಚು ಪ್ರಕರಣಗಳು ಇವೆ. ಈ ಹಿಂದೆ ಗಣಿಗಾರಿಕೆ ವಿಚಾರದಲ್ಲಿ ಸಿದ್ದರಾಮಯ್ಯ ಅವರು ದೊಡ್ಡ ಹೋರಾಟ ನಡೆಸಿದ್ದರು. ಈಗ ನಾಗೇಂದ್ರ ಅವರನ್ನೇ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಸಿದ್ದರಾಮಯ್ಯ ಅವರು ವಾಪಸ್ ಪಡೆದು ನ್ಯಾಯ ಕಲ್ಪಿಸಿದ್ದಾರೆ. ಅದೇ ನಾಗೇಂದ್ರಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದರು.
‘ಪ್ರಕರಣಗಳನ್ನು ವಾಪಸ್ ಪಡೆಯುವ ವಿಚಾರದಲ್ಲಿ ತಾರತಮ್ಯ ಎಸಗಿರುವ ಸಿದ್ದರಾಮಯ್ಯ ಅವರ ನಡೆಯನ್ನು ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ’ ಎಂದು ಹೇಳಿದರು.
‘ಡಿಕೆಶಿ ಮೇಲೆ ಐ.ಟಿ, ಇ.ಡಿ ದಾಳಿ ನಡೆದ ಮೇಲೆಯೇ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ಕೊಟ್ಟಿತ್ತು. ರಾಜಕೀಯ ದ್ವೇಷದಿಂದ ಶಿವಕುಮಾರ್ ಮೇಲೆ ತನಿಖೆಗೆ ಅನುಮತಿ ನೀಡಲಾಗಿತ್ತು ಎನ್ನುವುದಾದರೆ, ನನ್ನ ಮೇಲೆ ಸಿದ್ದರಾಮಯ್ಯ ಯಾವ ಕಾರಣದಿಂದ ತನಿಖೆಗೆ ಅನುಮತಿ ಕೊಟ್ಟಿದ್ದರು’ ಎಂದು ಪ್ರಶ್ನಿಸಿದರು.