ಬೆಂಗಳೂರು: ಇಸ್ರೇಲ್ ಕಾನ್ಸಲ್ ಜನರಲ್ ಕಚೇರಿ ನಗರದಲ್ಲಿ ಬುಧವಾರ ಅಂತರರಾಷ್ಟ್ರೀಯ ಹತ್ಯಾಕಾಂಡದ ದಿನದ ಸ್ಮರಣೆಯ ಕಾರ್ಯಕ್ರಮವನ್ನು ಏರ್ಪಡಿಸಿತ್ತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಸ್ರೇಲ್ನ ದಕ್ಷಿಣ ಭಾರತದ ಕಾನ್ಸಲ್ ಜನರಲ್ ಮುಖ್ಯಸ್ಥ ಜೋನಾಥನ್ ಝಡ್ಕ ಮಾತನಾಡಿ, ದೇಷ, ಜನಾಂಗೀಯ ತಾರತಮ್ಯದಿಂದ ಮನುಕುಲಕ್ಕೆ ಹಾನಿಯೇ ಹೊರತು ಒಳಿತಾಗುವುದಿಲ್ಲ. ಎರಡನೇ ವಿಶ್ವ ಯುದ್ಧದ ಸಂದರ್ಭ ಜರ್ಮನಿಯಲ್ಲಿ ನಡೆದ ಯಹೂದಿಗಳ ನರಮೇಧ ಈ ಪಾಠವನ್ನು ಜಗತ್ತಿಗೆ ಸಾರುತ್ತದೆ. ಭವಿಷ್ಯದಲ್ಲಿ ಎಂದೂ ಇಂತಹ ಸ್ಥಿತಿ ಬಾರದಂತೆ ಒಗ್ಗಟ್ಟಾಗಿ ಹೋರಾಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಅಮೆರಿಕ, ಯುಕೆ, ಜರ್ಮನಿ, ಫ್ರಾನ್ಸ್, ಸ್ವಿಡ್ಜರ್ಲ್ಯಾಂಡ್, ಜಪಾನ್ ಮುಂತಾದ ರಾಷ್ಟ್ರಗಳ ರಾಯಭಾರಿ ಕಚೇರಿಗಳ ಮುಖ್ಯಸ್ಥರು. ವಿವಿಧ ಧರ್ಮಗಳ ಮುಖಂಡರು ಮೇಣದ ಬತ್ತಿ ಬೆಳಗಿದರು. ಹತ್ಯಾಕಾಂಡದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಯಹೂದಿ ಧರ್ಮ ಗುರು ಪ್ರಾರ್ಥನೆ ಸಲ್ಲಿಸಿದರು.