ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಸಿಬಿ ಉಗ್ರ ನಿಗ್ರಹ ದಳದಿಂದ (ಎಟಿಸಿ) ಎನ್ಐಎಗೆ ವಹಿಸಲಾಗಿದೆ. ಸಿಸಿಬಿಯಿಂದ ಕಡತಗಳನ್ನು ವಶಕ್ಕೆ ಪಡೆದಿರುವ ಎನ್ಐಎ ಅಧಿಕಾರಿಗಳು, ಜಿಹಾದಿ ತಂಡದ ವಿರುದ್ಧ ಜ. 23ರಂದು ಪ್ರತ್ಯೇಕ ಎಫ್ಐಆರ್ ದಾಖಲಿಸಿದೆ. ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ನಲ್ಲಿ 17 ಮಂದಿ ಶಂಕಿತ ಉಗ್ರರ ಹೆಸರಿದೆ. ಈ ಪೈಕಿ, ಮೆಹಬೂಬ್ ಪಾಷಾ ಸೇರಿ ದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಐಎಸ್ ಸಂಘಟನೆಗೆ ಹೊಸ ಸದಸ್ಯರ ನೇಮಕಾತಿ ಮತ್ತು ತರಬೇತಿಗೆ ತಮಿಳುನಾಡಿನ ಶಂಕಿತ ಉಗ್ರ ಖಾಜಾ ಮೊಹಿದ್ದೀನ್ ತಯಾರಿ ನಡೆಸಿದ್ದ. ಜಿಹಾದಿ ಗ್ಯಾಂಗ್ ಕಟ್ಟಿ ಮೆಹಬೂಬ್ ಪಾಷ ಸೇರಿ ಕೆಲವರಿಗೆ ಸಂಘಟನೆ ಹೊಣೆ ವಹಿಸಿದ್ದ ಎನ್ನಲಾಗಿದೆ. ತಮಿಳುನಾಡು ಪೊಲೀಸರು ಬೆಂಗಳೂರಿನಲ್ಲಿ ಮೂವರ ಬಂಧಿಸುತ್ತಿದ್ದಂತೆ ಮೆಹಬೂಬ್ ಪಾಷಾ, ಸಹಚರರು ತಲೆಮರೆಸಿಕೊಂಡಿದ್ದರು.