ಬೆಂಗಳೂರು: ಕಲಾಸಿಪಾಳ್ಯ ಹೊಸ ಬಡಾವಣೆಯ 2ನೇ ಅಡ್ಡರಸ್ತೆಯಲ್ಲಿ ವಿಷಕಾರಿ ತ್ಯಾಜ್ಯ ಎಸೆಯಲಾಗಿದ್ದು, ಆ ಸಂಬಂಧ ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಿಷಕಾರಿ ತ್ಯಾಜ್ಯ ಎಸೆದಿದ್ದಾರೆ ಎನ್ನಲಾದ ಅಲೆಪ್ಪ ಪಾರ್ಸೆಲ್ ಸರ್ವೀಸಸ್ನ ಮಾಲೀಕರ ವಿರುದ್ಧ ಬಿಬಿಎಂಪಿಯ ಕಿರಿಯ ಆರೋಗ್ಯ ಪರಿವೀಕ್ಷಕ ವೀರಯ್ಯ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ಅಲೆಪ್ಪ ಪಾರ್ಸೆಲ್ ಸರ್ವೀಸಸ್ನವರು ವಿಷಕಾರಿ ತ್ಯಾಜ್ಯವಾದ ಅವಧಿ ಮೀರಿದ ಔಷಧಿಗಳನ್ನು ರಸ್ತೆಯಲ್ಲೇ ಎಸೆದು ಹೋಗಿದ್ದಾರೆ. ಈ ತ್ಯಾಜ್ಯ ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ’ ಎಂದು ವೀರಯ್ಯ ದೂರಿನಲ್ಲಿ ತಿಳಿಸಿದ್ದಾರೆ.
‘ತ್ಯಾಜ್ಯ ಎಸೆದ ಬಗ್ಗೆ ನೋಟಿಸ್ ನೀಡಲು ಅಲೆಪ್ಪ ಪಾರ್ಸೆಲ್ ಸರ್ವೀಸಸ್ ಕಚೇರಿಗೆ ಹೋದಾಗ ಮಾಲೀಕರು ಉಡಾಫೆಯಿಂದ ಮಾತನಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಅವರು ಒತ್ತಾಯಿಸಿದ್ದಾರೆ.