ಮಳವಳ್ಳಿ: ತಾಲ್ಲೂಕಿನ ಕುಂದನಿ ಬೆಟ್ಟದ ಮೇಲೆ ಕಲ್ಮನೆ ಕಾಮೇಗೌಡರು ಕಟ್ಟಿರುವ ಕಟ್ಟೆಗಳ ಸತ್ಯಾಸತ್ಯತೆ ತಿಳಿಯಲು ತಜ್ಞರ ಸಮಿತಿ ರಚನೆ ಮಾಡಲಾಗುವುದು. ಸಮಿತಿಯ ವರದಿಯ ಆಧಾರದ ಮೇಲೆ ಕಟ್ಟೆ ನಿರ್ಮಾಣ ನಿಜವೇ, ಸುಳ್ಳೇ ಎಂಬ ಬಗ್ಗೆ ನಿರ್ಧಾರ ಮಾಡಲಾಗುವುದು’ ಎಂದು ಉಪ ವಿಭಾಗಾಧಿಕಾರಿ ಸೂರಜ್ ಹೇಳಿದರು.
ದಾಸನದೊಡ್ಡಿ ಗ್ರಾಮಸ್ಥರು ಹಾಗೂ ಕಾಮೇಗೌಡರ ನಡುವೆ ಇರುವ ಭಿನ್ನಾಭಿಪ್ರಾಯ ಶಮನಗೊಳಿಸಲು ಶುಕ್ರವಾರ ಗ್ರಾಮದಲ್ಲಿ ನಡೆದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.
‘ಜುಲೈ 21ರೊಳಗೆ ಸಮಿತಿ ರಚನೆ ಮಾಡಿ ಆದಷ್ಟು ಬೇಗ ವರದಿ ಪಡೆಯಲಾಗುವುದು. ಸಮಿತಿಯಲ್ಲಿ ಭೂ ವಿಜ್ಞಾನಿಗಳು, ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಇಒ, ಪೊಲೀಸ್ ಅಧಿಕಾರಿಗಳು ಸ್ಥಾನ ಪಡೆಯಲಿದ್ದಾರೆ’ ಎಂದರು.
ಶಾಂತಿ ಸಭೆಯಲ್ಲಿ ಗ್ರಾಮಸ್ಥರು ಕಾಮೇಗೌಡರ ವಿರುದ್ದ ದೂರುಗಳ ಸುರಿಮಳೆಗೈದರು. ಕಾಮೇಗೌಡರಿಗೆ ಆನಾರೋಗ್ಯ ಇರುವ ಕಾರಣ ಅವರು ಸಭೆಯಲ್ಲಿ ಹಾಜರಾಗಿರಲಿಲ್ಲ.
‘ನಾನೇ ಸ್ಥಳಕ್ಕೆ ಭೇಟಿ ನೀಡಿ ಕಟ್ಟೆಗಳನ್ನು ಪರಿಶೀಲನೆ ನಡೆಸಿದ್ದೆ. ಆದರೆ, ಕಟ್ಟೆಗಳ ಬಗ್ಗೆ ಗ್ರಾಮಸ್ಥರಲ್ಲಿ ಸಾಕಷ್ಟು ಅನುಮಾನ ಇರುವುದರಿಂದ ಅದರ ಬಗ್ಗೆ ತಜ್ಞರಿಂದ ಒಂದು ವರದಿ ಪಡೆಯಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.