ಬೆಂಗಳೂರು: ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟ, ಕರ್ನಾಟಕ ಸಂಘಟನೆಗಳ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ‘ಜಾಗೃತಿ ಅಭಿಯಾನ’ಕ್ಕೆ ನಗರ ದೇವತೆ ಅಣ್ಣಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಬುಧವಾರ ಚಾಲನೆ ನೀಡಲಾಯಿತು.
ಎಲ್ಲ ಮಳಿಗೆ, ಅಂಗಡಿ ಮತ್ತು ಮಾಲ್ಗಳ ನಾಮಫಲಕ ಕಡ್ಡಾಯವಾಗಿ ಶೇ 60ರಷ್ಟು ಕನ್ನಡ ಬಳಸಬೇಕು. ನಂತರ ಅನ್ಯ ಭಾಷೆ ಅವಕಾಶ ಎಂಬ ಕಾಯ್ದೆ ಜಾರಿಗೆ ತರಲಾಗಿದೆ. ಆದರೂ ಕನ್ನಡ ಅನುಷ್ಠಾನ ಆಗುತ್ತಿಲ್ಲ ಎಂದು ಆಪಾದಿಸಿದರು.
ಕನ್ನಡ ನಾಮಫಲಕ ಹಾಕದಿರುವ ಅಂಗಡಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಬೇಕು. ಅಂತಹ ಮಳಿಗೆಗಳ ಪರವಾನಗಿ ರದ್ದು ಪಡಿಸಬೇಕು. ನಾಮಫಲಕ ಆಳವಡಿಸಿದ ಮೇಲೆ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡಬೇಕು ಎಂದು ಸಮಿತಿ ಪದಾಧಿಕಾರಿಗಳು ಆಗ್ರಹಿಸಿದರು.
ಕನ್ನಡ ನಾಮಫಲಕ ಕಡ್ಡಾಯ ಜಾರಿಗೊಳಿಸಲು ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಕನ್ನಡ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ನಟರಾಜ್ ಬೊಮ್ಮಸಂದ್ರ, ಕನ್ನಡಪರ ಹೋರಾಟಗಾರರಾದ ಫಾಲನೇತ್ರ, ವೈಭವ ಕರ್ನಾಟಕ ಸಂಘಟನೆ ಅಧ್ಯಕ್ಷ ಟಿ.ವೆಂಕಟೇಶ್ಗೌಡ, ಅಂಬೇಡ್ಕರ್ ಮಾನವ ಹಕ್ಕುಗಳ ವೇದಿಕೆ ರಾಜ್ಯ ಅಧ್ಯಕ್ಷ ಕ್ರಾಂತಿ ರಾಜು, ಸಮಿತಿ ಅಧ್ಯಕ್ಷ ಮೇಲುಕೋಟೆ ಬೆಟ್ಟಸ್ವಾಮಿಗೌಡ ಭಾಗವಹಿಸಿದ್ದರು.