ಬೆಂಗಳೂರು: ‘ಜೋಶುವಾ ಪ್ರಾಜೆಕ್ಟ್ ಎಂಬ ಕ್ರೈಸ್ತ ಸಂಸ್ಥೆಗೆ ಎಚ್. ಕಾಂತರಾಜು ಆಯೋಗದ ವರದಿಯು ಸೋರಿಕೆಯಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ದೂರಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮೆರಿಕದ ಈ ಸಂಸ್ಥೆಯು ಬೇರೆ ಧರ್ಮದವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವ ಕೆಲಸ ಮಾಡುತ್ತಿದೆ. ಆದ್ದರಿಂದ, ಮುಖ್ಯಮಂತ್ರಿ ಅವರು ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
‘ಜೋಶುವಾ ಪ್ರಾಜೆಕ್ಟ್ ಮತ್ತು ಅನೇಕ ಸಂಸ್ಥೆಗಳು ಹಿಂದೂ ಧರ್ಮ ಮತ್ತು ಮಠಗಳ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿವೆ. ಇವರಿಗೆ ವಿದೇಶಗಳಿಂದ ಹಣ ಪೂರೈಕೆ ಮಾಡುತ್ತಿದ್ದು, ಹಿಂದೂ ಧರ್ಮಕ್ಕೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದರು.