ಬೆಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ (ಅಂಬೇಡ್ಕರ್ ವಾದ) ಇದೇ 9ರಂದು ಬಿ. ಕೃಷ್ಣಪ್ಪ ಅವರ ಜನ್ಮ ದಿನವನ್ನು ‘ಸಂಘರ್ಷ ಸಮಾನತೆಯ ದಿನ’ವನ್ನಾಗಿ ಆಚರಿಸಲಾಗುವುದು ಎಂದು ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಯಕ್ರಮವು ಜೆ.ಸಿ. ರಸ್ತೆಯಲ್ಲಿರುವ ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ನಡೆಯಲಿದೆ. ಬಿ. ಕೃಷ್ಣಪ್ಪ ಅವರು ಶೋಷಿತ ಸಮುದಾಯಗಳ ಸ್ವಾಭಿಮಾನ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಸದಾ ದುಡಿಯುತ್ತಿದ್ದರು. ಕೃಷ್ಣಪ್ಪ ಅವರು ಸಮಸಮಾಜ ನಿರ್ಮಿಸುವುದಕ್ಕಾಗಿ ತಮ್ಮ ಇಡೀ ಜೀವನ ಸವೆಸಿದ್ದಾರೆ. ಇಂತಹ ನಾಯಕನ ಜನ್ಮದಿನವನ್ನು ‘ಸಂಘರ್ಷ ಸಮಾನತೆಯ ದಿನ’ವನ್ನಾಗಿ ಆಚರಿಸಲಾಗುವುದು’ ಎಂದು ಹೇಳಿದರು.
ಸಚಿವರಾದ ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಬಿ. ಕೃಷ್ಣಪ್ಪ ಟ್ರಸ್ಟ್ನ ಇಂದಿರಾ ಕೃಷ್ಣಪ್ಪ, ದಲಿತ ಮುಖಂಡ ರುದ್ರಪ್ಪ ಹನಗವಾಡಿ, ಉಪನ್ಯಾಸಕ ಸಿ.ಜಿ. ಲಕ್ಷ್ಮಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.