ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್–2ಗೆ ಕಲಾತ್ಮಕ ಸ್ಪರ್ಶ ನೀಡಲು ಮುಂದಾಗಿರುವ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆ (ಬಿಐಎಎಲ್) ಈ ಕುರಿತು ತಜ್ಞರೊಂದಿಗೆ ಸಮಾಲೋಚನೆ ಆರಂಭಿಸಿದೆ.
ಹೊಸ ಟರ್ಮಿನಲ್ನಲ್ಲಿ ಕಿರು ಕಾನನ ಸೃಷ್ಟಿಸಲು ಯೋಜನೆ ರೂಪಿಸಿರುವ ಬಿಐಎಎಲ್, ತಂತ್ರಜ್ಞಾನದ ಸಹಾಯದೊಂದಿಗೆ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಇಲ್ಲಿ ಬಿಂಬಿಸಲು ಮುಂದಾಗಿದೆ. ಇದರ ಭಾಗವಾಗಿ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ನಲ್ಲಿ (ಬಿಐಸಿ) ಬುಧವಾರ ವಾಸ್ತುಶಿಲ್ಪಿಗಳು ಹಾಗೂ ಕಲಾವಿದರ ಜೊತೆ ಸಂವಾದ ನಡೆಸಿತು.
ಪ್ರಯಾಣಿಕರಿಗೆ ರಾಜ್ಯದ ಹಾಗೂ ಬೆಂಗಳೂರಿನ ಇತಿಹಾಸ, ಕಲೆ, ಸಂಸ್ಕೃತಿಯನ್ನು ಕಟ್ಟಿಕೊಡುವ ಉದ್ದೇಶದಿಂದ ಸುತ್ತಾಡುವ ವಸ್ತುಪ್ರದರ್ಶನ ಮತ್ತು ಪ್ರದರ್ಶನ ಕಲೆಗಳನ್ನು ವಿನ್ಯಾಸಗೊಳಿಸುವ ಉದ್ದೇಶವನ್ನು ಬಿಐಎಎಲ್ ಹೊಂದಿದೆ.
ನಗರ ವಾಸ್ತುಶಿಲ್ಪಿ ನರೇಶ್ ನರಸಿಂಹನ್, ‘ವಿಮಾನನಿಲ್ದಾಣ ಮತ್ತು ಮೆಟ್ರೊ ನಿಲ್ದಾಣಗಳನ್ನು ಸಾಂಸ್ಕೃತಿಕ ಕೇಂದ್ರಗಳನ್ನಾಗಿಯೂ ರೂಪಿಸಬೇಕು’ ಎಂದು ಹೇಳಿದರು.
‘ಸೂಕ್ಷ್ಮ ನಿರೂಪಣೆಗಳನ್ನು ಸೃಜನಾತ್ಮಕ ತಂತ್ರಜ್ಞಾನದೊಂದಿಗೆ ಬಳಸಬಹುದು’ ಎಂದು ಕಲಾ ಇತಿಹಾಸಕಾರ ಸುರೇಶ್ ಸಲಹೆ ನೀಡಿದರು.