ಬೆಂಗಳೂರು: ‘ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ 32 ಎಕರೆ ವಿಸ್ತೀರ್ಣದಲ್ಲಿ ನಂದಿನಿ ಹಾಲಿನ ಉತ್ಪಾದನೆ ಪ್ಯಾಕಿಂಗ್ ಮಾಡುವ ಅತ್ಯಾಧುನಿಕ ಘಟಕವನ್ನ ನಿರ್ಮಿಸಲಾಗುವುದು’ ಎಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಕೆಎಂಎಫ್ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, '32 ಎಕರೆ ಜಮೀನು ಕೆಎಂಎಫ್ಗೆ ಮಂಜೂರಾಗಿದೆ. ಜಮೀನು ಹಸ್ತಾಂತರ ಪ್ರಕ್ರಿಯೆ ಮುಗಿದ ತಕ್ಷಣ ಘಟಕ ನಿರ್ಮಾಣ ಆರಂಭಿಸಲಾಗುವುದು' ಎಂದರು.
‘ಹೊರ ರಾಜ್ಯಗಳಲ್ಲೂ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮುಂಬೈ, ಪುಣೆ, ಗೋವಾ, ಚೆನ್ನೈ, ಹೈದರಾಬಾದ್ ನಗರಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.
‘ದೀರ್ಘಕಾಲ ಬಾಳಿಕೆಯ ಗುಡ್ ಲೈಫ್ ಹಾಲಿಗೆ ಬೇಡಿಕೆ ಹೆಚ್ಚಾಗಿದೆ. ಈಗ ಪ್ರತಿದಿನ 8.8 ಲಕ್ಷ ಲೀಟರ್ ಮಾರಾಟವಾಗುತ್ತಿದೆ’ ಎಂದರು.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್, ನಿರ್ದೇಶಕರಾದ ಸುರೇಶ್ ಕುಮಾರ್, ಎಂ.ಟಿ. ಕುಲಕರ್ಣಿ, ರಮೇಶ್ ಕೊಣ್ಣೂರ, ಡಾ.ಸಿ.ಎನ್. ರಮೇಶ್, ಮುನಿರೆಡ್ಡಿ ಸಭೆಯಲ್ಲಿದ್ದರು.