ಬೆಂಗಳೂರು: ‘ಕೆಎಸ್ಆರ್ಟಿಸಿ ಬಸ್ ಚಾಲಕರು, ನಿರ್ವಾಹಕರ ಮೇಲೆ ದಾಖಲಿಸಿರುವ ಮೊಕದ್ದಮೆಗಳನ್ನು ರಾಜ್ಯ ಸರ್ಕಾರವು ಹಿಂದಕ್ಕೆ ಪಡೆಯಬೇಕು’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಸಂಘದ ರಾಜ್ಯ ಅಧ್ಯಕ್ಷ ಎಫ್.ಎಚ್.ಜಕ್ಕಪ್ಪನವರ ಆಗ್ರಹಿಸಿದರು.
ನಿಗಮದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಸಂಘವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.
‘ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹಿಸಿ ಪರ್ಯಾಯ ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಕೆಲವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ನೌಕರರನ್ನು ಬೇರೆ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿತ್ತು’ ಎಂದರು. ‘ಕೆಎಸ್ಆರ್ಟಿಸಿಯನ್ನು ಖಾಸಗೀಕರ ಣಗೊಳಿಸುವ ಹುನ್ನಾರ ನಡೆಯುತ್ತಿದೆ. ಸಾರ್ವಜನಿಕ ಉದ್ದಿಮೆಗಳು ಉಳಿಯ ಬೇಕು. ಅವುಗಳ ಅಭಿವೃದ್ಧಿಯಿಂದ ಕಲ್ಯಾಣ ರಾಜ್ಯ ಸಾಧ್ಯವಾಗಲಿದೆ. ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು’ ಎಂದು ಆಗ್ರಹಿಸಿದರು.
‘ರಾಜ್ಯದಲ್ಲಿ ನಿಗಮಕ್ಕೆ ಸೇರಿದ 3,700 ಎಕರೆಯಷ್ಟು ಆಸ್ತಿಯಿದೆ. ನಿಗಮದ ಅಭಿವೃದ್ಧಿ ಕಾರ್ಯಕ್ಕೆ ಬೆಂಗಳೂರಿನಲ್ಲಿ 1,200 ಎಕರೆ ಗುರುತಿಸಲಾಗಿತ್ತು. ಅದನ್ನು ಅದಾನಿಗೆ ಕೊಡುವುದಾಗಿ ಸಂಸದರೊಬ್ಬರು ಹೇಳಿದ್ದಾರೆ. ಯಾವ ಕಾರಣಕ್ಕೂ ಈ ಕೆಲಸ ನಡೆಯಬಾರದು’ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ಅಂಬೇಡ್ಕರ್ ಜಾತಿ ಹಾಗೂ ಹಸಿವು ಮುಕ್ತ ಭಾರತ ನಿರ್ಮಿಸುವ ಕನಸು ಕಂಡಿದ್ದರು. ಆ ನಿಟ್ಟಿನಲ್ಲಿ ಪ್ರಬುದ್ಧ ಹಾಗೂ ವೈಚಾರಿಕ ಭಾರತ ನಿರ್ಮಿಸಬೇಕಿದೆ’ ಎಂದು ನುಡಿದರು.
ಮೈಸೂರಿನ ಉರಿಲಿಂಗ ಪೆದ್ದೀಶ್ವರ ಸಂಸ್ಥಾನ ಶಾಖಾ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಎಸ್.ಉಮೇಶ್, ಶಾಖಾ ಮಾರುತಿ, ಎಸ್.ಶ್ರೀನಿವಾಸ, ಎಚ್.ದಿವಾಕರ್, ಎಂ,ಜಗದೀಶ್, ಲಕ್ಷ್ಮಣ್ ಮೊದಲಾದವರು ಹಾಜರಿದ್ದರು.