‘ಸೇತುವೆ ಕಾಮಗಾರಿ ಪ್ರಾರಂಭಿಸಿ’
ವಿಜಯನಗರ ವಿಧಾನಸಭೆ ಕ್ಷೇತ್ರದ ಕೆಂಪಾಪುರ ವಾರ್ಡ್ ಸಂಖ್ಯೆ 122ರ ಗುರುಕುಲ ಶಾಲೆಯ ಸಮೀಪದ 9ನೇ ಅಡ್ಡರಸ್ತೆಯಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಯನ್ನು ಆರು ತಿಂಗಳಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದ, ವಾಹನ ಸಂಚಾರಕ್ಕೆ ಸಮಸ್ಯೆ ಆಗಿದೆ. ಈ ರಸ್ತೆಯಲ್ಲಿ ರಾಜಕಾಲುವೆಯ ಮೇಲೆ ಸೇತುವೆ ಕಾಮಗಾರಿ ಪ್ರಾರಂಭಿಸಲಾಗಿತ್ತು. ರಸ್ತೆಯನ್ನು ಅಗೆದು ಹಾಗೆಯೇ ಬಿಡಲಾಗಿದೆ. ರಾಜಕಾಲುವೆಯ ನೀರು ಕಟ್ಟಿಕೊಂಡು ಗಬ್ಬೆದ್ದು ನಾರುತ್ತಿದ್ದು, ಸೊಳ್ಳೆಗಳ ಕಾಟ ವಿಪರೀತವಾಗಿದೆ. ಬಿಬಿಎಂಪಿ ಕೂಡಲೇ ಇಲ್ಲಿನ ಕಾಮಗಾರಿ ಪ್ರಾರಂಭಿಸಿ ಸಮಸ್ಯೆಗೆ ಮುಕ್ತಿ ಹಾಡಬೇಕು.
।ಎಂ. ಉಮಾಶಂಕರಬಾಬು, ಕೆಂಪಾಪುರ ಅಗ್ರಹಾರ, ಮಾಗಡಿ ರಸ್ತೆ
--
‘ರಸ್ತೆ ಗುಂಡಿ ಮುಚ್ಚಿ’
ಹೈದರಾಬಾದ್, ಬಳ್ಳಾರಿ ಮತ್ತು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎಸ್ಟೀಮ್ ಮಾಲ್ ಮುಂಭಾಗದ ಹೆಬ್ಬಾಳ ಕೆಂಪಾಪುರ ಮುಖ್ಯ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ರಸ್ತೆಯಲ್ಲ ಹಾಳಾಗಿದೆ. ಈ ಭಾಗದ ಪ್ರಮುಖ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದು, ವಾಹನ ಸಂಚಾರಕ್ಕೆ ಅನನುಕೂಲವಾಗಿದೆ. ರಸ್ತೆಯಲ್ಲಿರುವ ಗುಂಡಿಗಳಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚು ಅಪಾಯವಿದ್ದು, ಅನಾಹುತಗಳು ಸಂಭವಿಸುವ ಮುನ್ನ ರಸ್ತೆ ದುರಸ್ತಿಗೊಳಿಸುವ ಅಗತ್ಯವಿದೆ. ಈ ಬಗ್ಗೆ ಬಿಬಿಎಂಪಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಈ ಬಗ್ಗೆ ಯಾರು ಸ್ಪಂದಿಸುತ್ತಿಲ್ಲ. ಕೂಡಲೇ ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.
।ಎಸ್. ಶಿವಪ್ರಸಾದ್, ಹೆಬ್ಬಾಳ
––
‘ಪ್ರಾಣಿದಯಾ ಸಂಘ ಸ್ಥಳಾಂತರಿಸಿ’
ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಸಂಖ್ಯೆ 130ಕ್ಕೆ ಸೇರಿದ ಕೆಂಗೇರಿ ಉಪನಗರದ 7ನೇ ಮುಖ್ಯರಸ್ತೆ ಸುಭಾಷ್ನಗರದಲ್ಲಿರುವ ಪ್ರಾಣಿದಯಾ ಸಂಘದವರ ಪ್ರಾಣಿಗಳ ಪೋಷಣಾ ಕೇಂದ್ರವಿದೆ. ಇದರಿಂದ, ವೃದ್ಧರು, ಮಕ್ಕಳು, ಕೆಲಸಕ್ಕೆ ಹೋಗುವ ನೌಕರರಿಗೆ ಸರಿಯಾಗಿ ನಿದ್ರೆ ಮಾಡಲು ಆಗುತ್ತಿಲ್ಲ. ಹಿಂದೆ ಈ ಪ್ರದೇಶದಲ್ಲಿ ಜನಸಂಖ್ಯೆ ಕಡಿಮೆ ಇತ್ತು. ಈಗ ಜನಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆ ಆಗುತ್ತಿದೆ. ಬಿಬಿಎಂಪಿ ಕೂಡಲೇ ಈ ಕೇಂದ್ರವನ್ನು ಜನವಸತಿ ಇಲ್ಲದ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು.
।ಆರ್. ಕೃಷ್ಣಮೂರ್ತಿ, ಸುಭಾಷ್ನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.