ಬೆಂಗಳೂರು: ಜ್ಞಾನಭಾರತಿ ಠಾಣೆ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ತಲೆ ಮೇಲೆ ಕಬ್ಬಿಣದ ತುಂಡುಗಳು ಬಿದ್ದು ಕಾರ್ಮಿಕ ಲಿಟನ್ ಬೌರಿ (38) ಎಂಬುವರು ಮೃತಪಟ್ಟಿದ್ದಾರೆ.
‘ಪಶ್ಚಿಮ ಬಂಗಾಳದ ಲಿಟನ್, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರ ಸಾವಿನ ಬಗ್ಗೆ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ಹೇಳಿದರು.
‘ರಾಜರಾಜೇಶ್ವರಿನಗರದ ಕೆಂಚನಹಳ್ಳಿಯ ನವಮಿ ಬಿಲ್ಡರ್ಸ್ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಅದೇ ಕಟ್ಟಡದ 23ನೇ ಮಹಡಿಗೆ ಕಬ್ಬಿಣದ ತುಂಡುಗಳನ್ನು ಕ್ರೇನ್ ಮೂಲಕ ಗುರುವಾರ ಸಾಗಿಸಲಾಗುತ್ತಿತ್ತು. ಕೆಳ ಅಂತಸ್ತಿನ ಅಂಗಳದಲ್ಲಿ ಲಿಟನ್ ಕೆಲಸ ಮಾಡುತ್ತಿದ್ದರು.’
‘ಮೇಲಕ್ಕೆ ಹೊರಟಿದ್ದ ಕ್ರೇನ್ನಲ್ಲಿದ್ದ ಕಬ್ಬಿಣದ ತುಂಡುಗಳು ಏಕಾಏಕಿ ಕಾರ್ಮಿಕ ಲಿಟನ್ ತಲೆ ಮೇಲೆ ಬಿದ್ದಿದ್ದವು. ತಲೆಗೆ ತೀವ್ರ ಪೆಟ್ಟು ಬಿದ್ದು ಲಿಟನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.