ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಿಕ ₹ 10,000 ಕೋವಿಡ್ ಭತ್ಯೆಗಾಗಿ ಪ್ರತಿಭಟನೆ

Last Updated 3 ಜೂನ್ 2021, 23:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ಸಂದರ್ಭದಲ್ಲೂ ಜೀವನ ಹಂಗು ತೊರೆದು ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮುಂದಿನ ಆರು ತಿಂಗಳಿನವರೆಗೆ ₹10,000 ಮಾಸಿಕ ಕೋವಿಡ್‌ ಭತ್ಯೆ ಹಾಗೂ ಸಾಂಕ್ರಾಮಿಕ ವೇತನ ನೀಡಬೇಕು’ ಎಂದು ಆಗ್ರಹಿಸಿ ಕಾರ್ಮಿಕರು ರಾಜ್ಯದಾದ್ಯಂತ ಗುರುವಾರ ಪ್ರತಿಭಟನೆ ನಡೆಸಿದರು.

ಅಖಿಲ ಭಾರತ ಕಾರ್ಮಿಕ ಸಂಘಟನೆಗಳ (ಎಐಸಿಸಿಟಿಯು) ಅಂಗ ಸಂಘಟನೆಗಳಾದ ಗುತ್ತಿಗೆ ಆರೋಗ್ಯ ನೌಕರರ ಒಕ್ಕೂಟ (ಸಿಎಚ್‌ಇಎಫ್‌) ಮತ್ತು ಅಖಿಲ ಭಾರತ ಮುನ್ಸಿಪಲ್ ವರ್ಕರ್ಸ್ ಒಕ್ಕೂಟ (ಎಐಎಂಡಬ್ಲ್ಯುಎಫ್‌) ಪ್ರತಿಭಟನೆಗೆ ಕರೆ ನೀಡಿದ್ದವು

ಪೌರ ಕಾರ್ಮಿಕರು, ಆಸ್ಪತ್ರೆಗಳ ಡಿ–ಗ್ರೂಪ್ ನೌಕರರು, ಸ್ವಚ್ಛತಾ ಕಾರ್ಮಿಕರು, ಸ್ಮಶಾನ ಕಾರ್ಮಿಕರು ಹಾಗೂ ಇತರೆ ಮುಂಚೂಣಿ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ತಾವು ಕೆಲಸ ಮಾಡುವ ಸ್ಥಳದಲ್ಲಿ ಹಾಗೂ ವಾಸವಿರುವ ಸ್ಥಳದಲ್ಲೇ ಅಂತರ ಕಾಯ್ದುಕೊಂಡು ಘೋಷಣಾ ಫಲಕಗಳನ್ನು ಪ್ರದರ್ಶಿಸಿ, ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕೋವಿಡ್ ಪರಿಸ್ಥಿತಿ ಎದುರಾದಾಗಿನಿಂದಲೂ ಕಾರ್ಮಿಕರನ್ನು ಹಲವು ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಕಾರ್ಮಿಕರು, ಕೋವಿಡ್‌ ಭೀತಿ ಇದ್ದರೂ ಜನರ ಪ್ರಾಣ ಉಳಿಸಲು ಕೆಲಸ ಮಾಡುತ್ತಿದ್ದಾರೆ. ಇಂಥ ಕಾರ್ಮಿಕರಿಗೆ ಇದುವರೆಗೂ ಯಾವುದೇ ಭತ್ಯೆ ನೀಡಿಲ್ಲ. ಬಹುತೇಕ ಕಡೆ ಮುಂಜಾಗ್ರತಾ ಕ್ರಮವಾಗಿ ಸುರಕ್ಷತಾ ಸಾಧನಗಳನ್ನೂ ಕೊಟ್ಟಿಲ್ಲ’ ಎಂದು ಪ್ರತಿಭಟನಕಾರರು ದೂರಿದರು.

‘ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಕೋವಿಡ್ ಲಸಿಕೆ ಉಚಿತವಾಗಿ ನೀಡಬೇಕು. ₹ 10 ಲಕ್ಷ ಆರೋಗ್ಯ ವಿಮೆ ಹಾಗೂ ₹ 50 ಲಕ್ಷ ಜೀವ ವಿಮೆ ಸೌಲಭ್ಯ ಒದಗಿಸಬೇಕು. ಕಾರ್ಮಿಕರಿಗೆಲ್ಲರಿಗೂ ರಕ್ಷಣಾತ್ಮಕ ಪರಿಕರಗಳು, ಉಪಕರಣಗಳನ್ನು ನೀಡಬೇಕು’ ಎಂದೂ ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT