ಬೆಂಗಳೂರು: ಸರ್ಕಾರಿ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಪಡೆದಿರುವಖಾಸಗಿ ಸಂಘ–ಸಂಸ್ಥೆಗಳಿಗೆ ಮಾರ್ಗಸೂಚಿ ದರದಲ್ಲಿ ಕಾಯಂ ಮಂಜೂರು ಮಾಡುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲಾಗಿದೆ.
ಸರ್ಕಾರಿ ಭೂಮಿ ಗುತ್ತಿಗೆ ಪಡೆದ ಸಂಸ್ಥೆಯು ಅದೇ ಉದ್ದೇಶಕ್ಕೆ ಬಳಸಿಕೊಂಡಿದ್ದು, ಕಾಯಂ ಮಾಡುವಂತೆ ಕೋರಿದರೆ ಪ್ರಸ್ತುತ ಮಾರ್ಗಸೂಚಿ ಮೌಲ್ಯ ವಿಧಿಸಲಾಗುವುದು. ಅನ್ಯ ಉದ್ದೇಶಕ್ಕಾಗಿ ಕಾಯಂ ಮಂಜೂರಾತಿಗೆ ಕೋರಿದರೆ ಮಾರ್ಗಸೂಚಿಯ ಎರಡು ಪಟ್ಟು ಮೌಲ್ಯ ವಿಧಿಸಲಾಗುವುದು.
ಜಿಲ್ಲಾಧಿಕಾರಿಯು ಗುತ್ತಿಗೆ ಜಮೀನುಗಳ ಸ್ಥಳ ಪರಿಶೀಲನೆ ನಡೆಸಬೇಕು. ಒಂದು ವೇಳೆ ಜಮೀನು ಬಳಸದೇ ಬಿಟ್ಟಿದ್ದರೆ ಅಂತಹ ಖುಲ್ಲಾ ಜಮೀನನ್ನು ಪುನಃ ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಸುಗ್ರೀವಾಜ್ಞೆ ಯಲ್ಲಿ ತಿಳಿಸಲಾಗಿದೆ.
ಕೈಗಾರಿಕಾ, ಶಿಕ್ಷಣ ಸಂಸ್ಥೆ, ವೈದ್ಯಕೀಯ, ಬೇಸಾಯ, ಧಾರ್ಮಿಕ ಸಂಸ್ಥೆ ಇತ್ಯಾದಿಗಳಿಗೆ ಲೀಸ್ ಮೇಲೆ ಜಮೀನು ಪಡೆದವರಿಗೆ ಕಾಯಂ ಮಾಡಿಕೊಡಲಾಗುವುದು. ಸರ್ಕಾರ ಹಣ ಕ್ರೋಡೀಕರಿಸಲು ತೀರ್ಮಾನಿಸಿದೆ.