‘ಮಾಧ್ಯಮಕ್ಕೂ ಜವಾಬ್ದಾರಿ ಇರಲಿ’
ವಿಧಾನಸಭಾ ಅಧಿವೇಶನದಲ್ಲಿ ಜನಪ್ರತಿನಿಧಿಗಳಿಗಿರುವಷ್ಟೆ ಜವಾಬ್ದಾರಿ ಪತ್ರಿಕಾ ಮಾಧ್ಯಮದವರಿಗೂ ಇರುತ್ತದೆ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ನಿಯಮಿತದ ಅಧ್ಯಕ್ಷರಾದ ಅಪ್ಪಾಜಿ ಸಿ.ಎಸ್.ನಾಡಗೌಡ ತಿಳಿಸಿದರು. ಅಧಿವೇಶನದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಯ ಬಗ್ಗೆ ಹಾಗೂ ಸಾರ್ವಜನಿಕ ಮಹತ್ವದ ವಿಷಯಕ್ಕೆ ಪ್ರಾಮುಖ್ಯ ನೀಡಬೇಕು ಎಂದು ಸಲಹೆ ನೀಡಿದರು. ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ ‘ಅಧಿವೇಶನವನ್ನು ನೇರ ವೆಬ್ಕಾಸ್ಟಿಂಗ್ ಮೂಲಕ ಎಲ್ಲಿಂದಾದರೂ ವೀಕ್ಷಿಸಿ ವರದಿ ಮಾಡಬಹುದು. ಮಾಧ್ಯಮದವರು ವಸ್ತುಸ್ಥಿತಿಯನ್ನು ಅರಿತು ಸುದ್ದಿ ಮಾಡಬೇಕು. ಸರ್ಕಾರ ಬಿಚ್ಚಿಡುವ ಮಾಹಿತಿಗಿಂತ ಮುಚ್ಚಿಟ್ಟಿದ್ದನ್ನು ಹುಡುಕಿ ವರದಿ ಮಾಡಬೇಕು’ ಎಂದು ತಿಳಿಸಿದರು.