ಕೆ.ಆರ್.ಪುರ: ಎನ್.ಆರ್.ಐ ಬಡಾವಣೆ ಮುಖ್ಯರಸ್ತೆಯ ಇಂದಿರಾ ಕ್ಯಾಂಟೀನ್ ಸಮೀಪ ನಿರ್ಮಿಸಲಾಗಿದ್ದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಸ್ಥಳೀಯರ ವಿರೋಧದ ನಡುವೆ ಶುಕ್ರವಾರ ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದರು.
ಶ್ರೀಕನಕ ಜನಜಾಗೃತಿ ಕುರುಬರ ಸಂಘ ಹಾಗೂ ಸ್ಥಳೀಯರ ಸಹಕಾರದಿಂದ ಸುಮಾರು 9 ಅಡಿ ಎತ್ತರದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಿಸಲಾಗಿತ್ತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ದಿನದಂದು ಪ್ರತಿಮೆ ಅನಾವರಣಗೊಳಿಸಲು ಸಿದ್ಧತೆ ನಡೆಸಲಾಗಿತ್ತು.
ಆದರೆ, ಬಿಬಿಎಂಪಿ ಜಾಗದಲ್ಲಿ ಯಾವುದೇ ಅನುಮತಿ ಪಡೆದಿಲ್ಲ ಎಂದು ಹೇಳಿ ಪೊಲೀಸ್ ಬಂದೋಬಸ್ತ್ನಲ್ಲಿ ಶುಕ್ರವಾರ ಮಧ್ಯಾಹ್ನ ತೆರವುಗೊಳಿಸಲಾಯಿತು.
ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದರು. ಇದೇ ಜಾಗದಲ್ಲಿ ಪ್ರತಿಮೆ ಪ್ರತಿಷ್ಠಾಪಿಸಬೇಕೆಂದು ಪಟ್ಟುಹಿಡಿದರು.
ಕಾಂತಿ ವೀರಸಂಗೊಳ್ಳಿ ರಾಯಣ್ಣ ಒಂದು ಸಮಾಜಕ್ಕೆ ಸೀಮತರಾದವರಲ್ಲ. ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರ. ಅಂತವರ ಪ್ರತಿಮೆ ನಿರ್ಮಿಸಿದ್ದೇವೆ. ಅಧಿಕಾರಿಗಳ ನಡೆ ಖಂಡನೀಯ ಎಂದು ಸಂಘದ ಅಧ್ಯಕ್ಷ ಕೃಷ್ಣಪ್ಪ ಆಕ್ಷೇಪ ವ್ಯಕ್ತಪಡಿಸಿದರು.