ಬೆಂಗಳೂರು: ಮೈದಾನದಲ್ಲಿ ಆಟವಾಡುತ್ತಿದ್ದ ಬಾಲಕರನ್ನು ಬಲವಂತವಾಗಿ ಮರಕ್ಕೆ ಕಟ್ಟಿಹಾಕಿ ಥಳಿಸಿ, ಅವರಿಂದ ಬೀಡಿ ಸೇದಿಸಿದ್ದ ಆರೋಪದಡಿ ಆರು ಮಂದಿಯನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.
‘ಸ್ಥಳೀಯ ನಿವಾಸಿ ವಿವೇಕ್ (18) ಬಂಧಿತ. ಆತ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಉಳಿದ ಐವರು ಬಾಲಕರು. ಬಾಲನ್ಯಾಯ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಬಿ. ನಾರಾಯಣಪುರದ ಶಾಲೆಯ ಮೈದಾನದಲ್ಲಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಇದರ ವಿಡಿಯೊ ಚಿತ್ರೀಕರಿಸಿದ್ದ ಆರೋಪಿಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಆ ವಿಡಿಯೊ ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದೂ ತಿಳಿಸಿದರು.
ಕಣ್ಣೀರು ಹಾಕಿದ್ದ ಮಕ್ಕಳು: ‘ಆರು ಆರೋಪಿಗಳು ಮೈದಾನದಲ್ಲಿ ಆಟವಾಡುತ್ತಿದ್ದರು. ಅದೇ ಸ್ಥಳಕ್ಕೆ ಇಬ್ಬರು ಮಕ್ಕಳು ಸಹ ಆಟವಾಡಲು ಬಂದಿದ್ದರು. ಅವರನ್ನು ತಡೆದಿದ್ದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು’ ಎಂದೂ ಮೂಲಗಳು ಹೇಳಿವೆ.
‘ಮಕ್ಕಳನ್ನು ಹಿಡಿದುಕೊಂಡಿದ್ದ ಆರೋಪಿಗಳು, ಮೈದಾನದಲ್ಲಿದ್ದ ಮರಕ್ಕೆ ಕಟ್ಟಿ ಹಾಕಿದ್ದರು. ಅವರ ಬಾಯಲ್ಲಿ ಬೀಡಿ ಇರಿಸಿ ಸೇದುವಂತೆ ಒತ್ತಾಯಿಸಿದ್ದರು. ಇದರಿಂದಾಗಿ ಮಕ್ಕಳು ಅಳಲಾರಂಭಿಸಿದ್ದರು. ಕಣ್ಣೀರು ಹಾಕಿದರೂ ಆರೋಪಿಗಳು ಬಿಟ್ಟಿರಲಿಲ್ಲ.’
‘ಮಕ್ಕಳು ಅಳುವ ದೃಶ್ಯವನ್ನು ಆರೋಪಿಗಳು ಚಿತ್ರೀಕರಿಸಿಕೊಂಡಿದ್ದರು. ಆ ವಿಡಿಯೊ ಎಲ್ಲೆಡೆ ಹರಿದಾಡಿತ್ತು’ ಎಂದೂ ಮೂಲಗಳು ತಿಳಿಸಿವೆ.