ಬೆಂಗಳೂರು: ಲಾಕ್ಡೌನ್ ಮಧ್ಯೆಯೇ ದುಷ್ಕರ್ಮಿಗಳು ಮಣಪ್ಪುರಂ ಫೈನಾನ್ಸ್ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು, ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕಳ್ಳತನ ಯತ್ನ ಸಂಬಂಧ ಮಣಪ್ಪುರಂ ಫೈನಾನ್ಸ್ ಶಾಖೆ ವ್ಯವಸ್ಥಾಪಕ ಕೃಷ್ಣ ಎಂಬುವರು ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಅವರಿಗಾಗಿ ಹುಡುಕಾಟ ನಡೆದಿದೆ’ ಎಂದು ಪೊಲೀಸರು ಹೇಳಿದರು.
‘ನಂದಿನಿ ಲೇಔಟ್ನ ಪರಿಮಳ ನಗರದಲ್ಲಿ ಫೈನಾನ್ಸ್ ಕಚೇರಿ ಇದೆ. ಇದೇ 30ರ ತಡರಾತ್ರಿ ಕಚೇರಿಯ ಶೆಟರ್ ಬೀಗ ಮುರಿದು ಕಳ್ಳರು ಒಳನುಗ್ಗಿದ್ದರು. ಹಣ ಹಾಗೂ ಚಿನ್ನಾಭರಣಕ್ಕಾಗಿ ಹುಡುಕಾಟ ನಡೆಸಿದ್ದರು.’
‘ಕಚೇರಿಯಲ್ಲಿ ಅಳವಡಿಸಿದ್ದ ಅಲಾರಾಂ ಶಬ್ದ ಮಾಡಲಾರಂಭಿಸಿತ್ತು. ಕಳ್ಳರು ಅಲ್ಲಿಂದ ಓಡಿಹೋಗಿದ್ದರು. ಕಚೇರಿಯ ವಲಯ ವ್ಯವಸ್ಥಾಪಕರ ಮೊಬೈಲ್ಗೆ ತುರ್ತು ಸಂದೇಶ ಹೋಗಿತ್ತು. ನಸುಕಿನ 5ರ ಸುಮಾರಿಗೆ ಕೃಷ್ಣ ಅವರು ಕಚೇರಿಗೆ ಹೋಗಿ ನೋಡಿದಾಗ ಶೆಟರ್ ತೆರೆದಿದ್ದು ಕಂಡಿತ್ತು. ಪರಿಶೀಲನೆ ನಡೆಸಿದಾಗ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲವೆಂಬುದು ತಿಳಿಯಿತು’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.