ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಸಗಟು ತರಕಾರಿ ಮಾರುಕಟ್ಟೆಗಳನ್ನು ಇದೇ 31ರವರೆಗೂ ಸೀಲ್ಡೌನ್ ಮಾಡಿ ಪಾಲಿಕೆ ಆದೇಶಿಸಿದೆ.
ಜೂನ್ 22ರಿಂದ ಹದಿನೈದು ದಿನಗಳವರೆಗೆ ತಾತ್ಕಾಲಿಕವಾಗಿ ಎರಡೂ ಮಾರುಕಟ್ಟೆಗಳನ್ನು ಸೀಲ್ಡೌನ್ ಮಾಡಲಾಗಿತ್ತು. ನಗರದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಗ್ರಾಹಕರು ಹಾಗೂ ವ್ಯಾಪಾರಿಗಳ ಆರೋಗ್ಯ ದೃಷ್ಟಿಯಿಂದ ಈ ತಿಂಗಳಾಂತ್ಯದವರೆಗೂ ಸೀಲ್ಡೌನ್ ಮುಂದುವರಿಸಲಾಗಿದೆ.
‘ಈಗಿನ ಪರಿಸ್ಥಿತಿಯಲ್ಲಿ ವ್ಯಾಪಾರಕ್ಕಿಂತ ಜನರ ಆರೋಗ್ಯ ಮುಖ್ಯ. ವರ್ತಕರೇ ಸ್ವಯಂಪ್ರೇರಿತವಾಗಿ ವ್ಯಾಪಾರ ಸ್ಥಗಿತಗೊಳಿಸಲು ನಿರ್ಧರಿಸಿದ್ದೆವು. ಸೀಲ್ಡೌನ್ ಆದೇಶ ಮುಂದುವರಿಸಿರುವ ಪಾಲಿಕೆ ಕ್ರಮ ಸೂಕ್ತವಾಗಿದೆ. ಇದಕ್ಕೆ ವರ್ತಕರ ಸಹಮತ ಇದೆ’ ಎಂದು ಕೆ.ಆರ್.ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ದಿವಾಕರ್ ತಿಳಿಸಿದರು.