ಬೆಂಗಳೂರು: ಪ್ರತಿಷ್ಠಿತ ಕಾಲೇಜುಗಳಲ್ಲಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಆರೋಪದಡಿ ಮುಖೇಶ್ ಕುಮಾರ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ಬಿಹಾರದ ಮುಖೇಶ್, ಸ್ನೇಹಿತ ಪ್ರಭಾತ್ ಜೊತೆ ಸೇರಿ ಹೆಣ್ಣೂರಿನಲ್ಲಿ ‘ಫ್ಯೂಚರ್ ಎಜುಕೇಶನ್ ಕನ್ಸಲ್ಟೆನ್ಸಿ’ ಕಂಪನಿ ಆರಂಭಿಸಿದ್ದ. ಅದರ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಸಂಪರ್ಕಿಸಿ ವಂಚಿಸುತ್ತಿದ್ದ. ಸದ್ಯ ಪ್ರಭಾತ್, ತಲೆಮರೆಸಿಕೊಂಡಿದ್ದಾನೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.
‘ಪ್ರವೇಶ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಆರೋಪಿಗಳು ಸಂಗ್ರಹಿಸುತ್ತಿದ್ದರು. ‘ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಖಾಲಿ ಇದೆ’ ಎಂದು ಹೇಳಿ ಸಂದೇಶ ಕಳುಹಿಸುತ್ತಿದ್ದರು. ಹಣ ಪಡೆದು ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗುತ್ತಿದ್ದರು’ ಎಂದರು.
‘ಕೆಲ ಕಾಲೇಜಿನ ಸಿಬ್ಬಂದಿಯೂ ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನವಿದೆ. ಆರೋಪಿ ಮುಖೇಶ್ನಿಂದ ಕೆಲ ದಾಖಲೆಗಳನ್ನು ಜಪ್ತಿ ಮಾಡಿ ಪರಿಶೀಲಿಸಲಾಗುತ್ತಿದೆ’ ಎಂದು ಅಧಿಕಾರಿ ಹೇಳಿದರು.