ಬೆಂಗಳೂರು: ‘ಅನ್ಯ ಧರ್ಮವನ್ನು ಗೌರವಿಸುವ ವ್ಯಕ್ತಿ ಮಾತ್ರ ತನ್ನ ಧರ್ಮವನ್ನು ನಿಜವಾಗಿ ಗೌರವಿಸುತ್ತಾನೆ’ ಎಂದು ಲೋಕಸಭೆ ಈ ಹಿಂದಿನ ಸ್ಪೀಕರ್ ಮೀರಾ ಕುಮಾರ್ ಹೇಳಿದರು.
ನಗರದ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ಓಪನ್ ಹಾರ್ಟ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮದು ಬಹುತ್ವದ ದೇಶ. ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಭಗವದ್ಗೀತೆ, ಬೈಬಲ್, ಖುರ್ಆನ್, ಗುರು ಗ್ರಂಥ ಸಾಹೀಬ್ ಎಲ್ಲವೂ ಇಲ್ಲಿವೆ. ಒಂದೇ ಧರ್ಮ ಇರಬೇಕೆನ್ನುವುದು ಸರಿಯಲ್ಲ’ ಎಂದರು.
‘ನಾನೂ ಹಲವು ಬಾರಿ ಅಸ್ಪೃಶ್ಯತೆ ಅನುಭವಿಸಿದ್ದೇನೆ. ದೆಹಲಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ವ್ಯಾಯಾಮ ಶಾಲೆಗೆ ಹೋಗಿದ್ದೆ. ನೀವು ವ್ಯಾಯಾಮ ಮಾಡಲು ಹೋದರೆ ಬೇರೆ ಮಹಿಳೆಯರು ಬರುವುದಿಲ್ಲ ಎಂದು ಆ ಸಂಸ್ಥೆಯ ತರಬೇತುದಾರರು ಹೇಳಿದ್ದರು’ ಎಂದು ಮೆಲುಕು ಹಾಕಿದರು.
ಚಿತ್ರನಟಿ ಮೇಘನಾ ರಾಜ್, ‘2018ನೇ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟಿಯಾಗಿ ಪ್ರಶಸ್ತಿ ಲಭಿಸಬಹುದು ಎಂದು ನಿರೀಕ್ಷಿಸಿರಲಿಲ್ಲ. ಇದರಿಂದ ಬಹಳ ಸಂತಸವಾಗಿದೆ’ ಎಂದರು.