ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ಸರ್ಕಾರ ನಿಲುವು ಸ್ಪಷ್ಟಪಡಿಸಲು ಆಗ್ರಹ

ರೈತರಿಂದಲೇ ಶಿಲಾನ್ಯಾಸ- – ಎಚ್ಚರಿಕೆ
Last Updated 14 ಆಗಸ್ಟ್ 2021, 19:41 IST
ಅಕ್ಷರ ಗಾತ್ರ

ರಾಮನಗರ: ಮೇಕೆದಾಟು ಜಲಾಶಯ ನಿರ್ಮಾಣ ಸಂಬಂಧ ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಸರ್ಕಾರದ ಕೈಲಿ ನಿರ್ಮಾಣ ಕಾರ್ಯ ಸಾಧ್ಯವಾಗದೇ ಇದ್ದಲ್ಲಿ ರೈತರೇ ಅಡಿಗಲ್ಲು ಹಾಕುತ್ತೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.

‘ಮೇಕೆದಾಟು ಜಲಾಶಯ ನಿರ್ಮಾಣ ಮಾಡುವುದಾಗಿ ಸರ್ಕಾರ ಹೇಳುತ್ತಲೇ ಬಂದಿದೆ. ಆದರೆ ಯಾವಾಗ ಚಾಲನೆ ನೀಡಲಾಗುವುದು ಹಾಗೂ ಯಾವಾಗ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಹೇಳುತ್ತಿಲ್ಲ. ಇದೇ ನಿರ್ಲಕ್ಷ್ಯ ಧೋರಣೆ ಮುಂದುವರಿದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ರೈತರು ಬಂದು ನಾವೇ ಅಡಿಗಲ್ಲು ಹಾಕುತ್ತೇವೆ. ಸದ್ಯದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಮಿಳುನಾಡಿನಲ್ಲಿ ಕಾವೇರಿ ನದಿ ನೀರು, ಮೇಕೆದಾಟು ಯೋಜನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಮೇಕೆದಾಟು ಯೋಜನೆ ವಿರುದ್ಧ ಸತ್ಯಾಗ್ರಹ ನಡೆಸಿರುವುದು ಸಹ ರಾಜಕೀಯ ಕಾರಣಕ್ಕೆ. ಹೀಗಾಗಿ ನಾವು ಪ್ರತಿಯಾಗಿ ಪ್ರತಿಭಟಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯ ಪಟ್ಟರು. ತಮಿಳುನಾಡಿನ ಖ್ಯಾತೆಗಳಿಗೆ ನಾವು ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ ಎಂದರು.

ಅಣ್ಣಾಮಲೈ ಪ್ರತಿಭಟನೆಯ ವಿಚಾರದಲ್ಲಿ ತಾನು ಭಾರತೀಯ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ಸಿ.ಟಿ. ರವಿ ಅವರ ಹೇಳಿಕೆ ಮೂರ್ಖತನದ್ದು. ಮೊದಲು ನಮ್ಮ ತಾಯಿಯನ್ನು ಅಮ್ಮ ಅನ್ನುತ್ತೇವೆ, ತದನಂತರವಷ್ಟೇ ಬೇರೆಯವರಿಗೆ ಆ ಗೌರವ ಎಂದು ಹೇಳಿದರು.

ಕಾವೇರಿ ನ್ಯಾಯಮಂಡಳಿ, ಸುಪ್ರೀಂ ಕೋರ್ಟಿ ತೀರ್ಪಿನಂತೆ ತಮಿಳುನಾಡಿಗೆ ಸಿಗಬೇಕಾದ ಪ್ರಮಾಣದಷ್ಟು ನೀರು ಸಿಗಲಿದೆ. ನೀರು ಸಿಗದಿದ್ದ ಪಕ್ಷದಲ್ಲಿ ಮಾತ್ರ ಆ ರಾಜ್ಯ ಕಾವೇರಿ ನಿರ್ವಹಣಾ ಮಂಡಳಿಗೆ ಮೊರೆ ಹೋಗಬಹುದು. ಇದಿಷ್ಟೇ ಆ ರಾಜ್ಯದ ಹಕ್ಕು. ಜಲಾಶಯ ನಿರ್ಮಾಣದ ವಿಚಾರದಲ್ಲಿ ಆಕ್ಷೇಪಣೆ ವ್ಯಕ್ತಪಡಿಸುವ ಹಕ್ಕು ಆ ರಾಜ್ಯಕ್ಕೆ ಇಲ್ಲ ಎಂದು ಹೇಳಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಅನುಸೂಯಮ್ಮ, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಚಂದ್ರಶೇಖರ್, ಪ್ರಮುಖರಾದ ಬೈರೇಗೌಡ, ರಮೇಶ್, ಅನಂತರಾಮ ಪ್ರಸಾದ್, ಗೋವಿಂದರಾಜು, ಸೀಬಕಟ್ಟೆ ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT