ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ರೀಚ್‌ 3ಸಿ: ಭೂಸ್ವಾಧೀನ ಹಾದಿ ಸುಗಮ

ಮಾದಾವರ ಬಳಿ 1,813 ಚ.ಮೀ. ಭೂಸ್ವಾಧೀನಕ್ಕೆ ಹಸಿರು ನಿಶಾನೆ
Last Updated 7 ಜೂನ್ 2020, 17:26 IST
ಅಕ್ಷರ ಗಾತ್ರ

ಬೆಂಗಳೂರು:‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನಾಗಸಂದ್ರದಿಂದ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದವರೆಗಿನ (ಬಿಐಇಸಿ) ವಿಸ್ತರಿತ ಮಾರ್ಗಕ್ಕೆ ಅಗತ್ಯವಾಗಿದ್ದ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಈ ಭೂಮಿಗೆ ಸಂಬಂಧಿಸಿದಂತೆ ನೈಸ್‌ ಮತ್ತು ಬಿಎಂಆರ್‌ಸಿಎಲ್‌ ನಡುವೆ ವಿವಾದ ಏರ್ಪಟ್ಟಿತ್ತು. ಸರ್ಕಾರದ ಈ ಅಧಿಸೂಚನೆಯಿಂದ ಈ ವಿಸ್ತರಿತ ಮಾರ್ಗ (ರೀಚ್‌ 3ಸಿ) ನಿರ್ಮಾಣದ ಹಾದಿ ಸುಗಮವಾದಂತಾಗಿದೆ. ಹೆಚ್ಚುವರಿಯಾಗಿ 1,813 ಚ.ಮೀ. ಭೂಮಿಯ ಸ್ವಾಧೀನಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.

‘ರಸ್ತೆ ನಿರ್ಮಾಣಕ್ಕಾಗಿ ನೈಸ್‌ ರಸ್ತೆಗೆ ಈ ಭಾಗದಲ್ಲಿ ಭೂಮಿ ಬಳಸಿಕೊಳ್ಳಲು ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ, ಬಿಐಇಸಿ ಮೆಟ್ರೊ ನಿಲ್ದಾಣ ನಿರ್ಮಾಣಕ್ಕೆ ಈ ಜಾಗದಲ್ಲಿ ಸ್ವಲ್ಪ ಭೂಮಿ ನಮಗೆ ಬೇಕಾಗಿತ್ತು. ಸರ್ಕಾರದ ಆದೇಶದಿಂದ ಈಗ ಅದು ಸಾಧ್ಯವಾಗಲಿದೆ’ ಎಂದು ಬಿಎಂಆರ್‌ಸಿಎಲ್‌ನ ಭೂಸ್ವಾಧೀನ ವಿಭಾಗದಪ್ರಧಾನ ವ್ಯವಸ್ಥಾಪಕ ಚನ್ನಪ್ಪಗೌಡರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಮೊದಲು ಭೂಸ್ವಾಧೀನಕ್ಕೆ ಮುಂದಾದಾಗ, ನೈಸ್‌ ಸಂಸ್ಥೆಯು ಈ ಕುರಿತು ಯಾವುದೇ ನೋಟಿಸ್‌ ನೀಡಿಲ್ಲ, ಸಮಯಾವಕಾಶವನ್ನೂ ನೀಡಿಲ್ಲ ಎಂದು ದೂರಿ ನ್ಯಾಯಾಲಯದ ಮೊರೆ ಹೋಗಿತ್ತು. ಈಗ ಸರ್ಕಾರ ಭೂಸ್ವಾಧೀನಕ್ಕೆ ಅನುಮತಿ ನೀಡಿದೆ. ಅಲ್ಲದೆ, ನ್ಯಾಯಾಲಯದ ಆದೇಶದಂತೆ ಹೊಸದಾಗಿ ಅಧಿಸೂಚನೆ ಹೊರಡಿಸಲಾಗುವುದು. ಈ ಸಂಬಂಧ ನೈಸ್‌ ಸಂಸ್ಥೆಗೆ ನೋಟಿಸ್‌ ನೀಡಲಾಗುವುದು. ಉತ್ತರಿಸಲು ಸಮಯಾವಕಾಶ ನೀಡಲಾಗುವುದು. ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

ನಾಗಸಂದ್ರದಿಂದ–ಬಿಐಇಸಿವರೆಗೆ ವಿಸ್ತರಣೆಗೆ ಅನುಮೋದನೆ ದೊರಕಿದ್ದು, 3.77 ಕಿ.ಮೀ. ಉದ್ದದವರೆಗೆ ಮೆಟ್ರೊ ರೈಲು ಮಾರ್ಗ ಇಲ್ಲಿ ನಿರ್ಮಾಣವಾಗುತ್ತದೆ.ಒಟ್ಟಾರೆ ಈ ಮಾರ್ಗದಲ್ಲಿ ಸುಮಾರು 24,000 ಚ.ಮೀ. ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಬಿಐಇಸಿ ನಿಲ್ದಾಣ ನಿರ್ಮಾಣಕ್ಕೂ 6,000 ಚ.ಮೀ. ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಈ ಪೈಕಿ 1,813 ಚ.ಮೀ. ಭೂಸ್ವಾಧೀನ ಕಾರ್ಯ ಕಗ್ಗಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT