ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಶಿವಮೊಗ್ಗ ಜಿಲ್ಲೆ ಭದ್ರಾವತಿ ಹೊಸಮನೆಯ ರಾಘವೇಂದ್ರ (27), ಕಿರಣ್ (28), ಶೌಕತ್ (28) ಹಾಗೂ ಬೆಂಗಳೂರು ಬನಶಂಕರಿ ಸರಬಂಡೆಪಾಳ್ಯದ ಬಲರಾಮ್ (38) ಬಂಧಿತರು. ಇವರಿಂದ ₹ 9 ಲಕ್ಷ ಮೌಲ್ಯದ 27 ಮೊಬೈಲ್ಗಳು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಜಬೀವುಲ್ಲಾ ಎಂಬುವರು ಡಿ. 4ರಂದು ಮಾರುಕಟ್ಟೆಗೆ ಹೋಗಿದ್ದರು. ಎಂ.ಡಿ. ವೃತ್ತದ ಬಳಿ ಸುತ್ತಾಡಿ ತರಕಾರಿ ಖರೀದಿಸುತ್ತಿದ್ದರು. ಅದೇ ಸಂದರ್ಭದಲ್ಲೇ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಜಬೀವುಲ್ಲಾ ಅವರ ಮೊಬೈಲ್ ಕದ್ದುಕೊಂಡು ಹೋಗಿದ್ದರು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.’
‘ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಇತರೆ ಪುರಾವೆಗಳನ್ನು ಆಧರಿಸಿ ತನಿಖೆ ನಡೆಸಿದ್ದ ವಿಶೇಷ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಆರೋಪಿಗಳು, ಮೊಬೈಲ್ ಕಳ್ಳತನ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದರು. ಕದ್ದ ಮೊಬೈಲ್ಗಳನ್ನು ಮಾರಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಬೆಂಗಳೂರು ಮಾತ್ರವಲ್ಲದೇ ಹಲವು ನಗರಗಳಲ್ಲೂ ಮೊಬೈಲ್ ಕಳ್ಳತನ ಮಾಡಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.