ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಬಿಡದಿಯ ಕೆಂಚನಕುಪ್ಪೆ ನಿವಾಸಿ ಸುಮಿತ್ರಾ (29) ಮೃತಪಟ್ಟವರು. ಗರ್ಭಿಣಿಯಾಗಿದ್ದ ಸುಮಿತ್ರಾ ಡಿ.16ರಂದು ತಪಾಸಣೆಗೆಂದು ರಾಜರಾಜೇಶ್ವರಿ ಆಸ್ಪತ್ರೆಗೆ ಬಂದಿದ್ದರು. ಅವರನ್ನು ಪರೀಕ್ಷಿಸಿದ್ದ ವೈದ್ಯರು, ರಕ್ತದೊತ್ತಡ ಹೆಚ್ಚಿದೆ ಎಂಬ ಕಾರಣ ನೀಡಿ ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದರು. 18ರ ಮಧ್ಯರಾತ್ರಿ ಸುಮಿತ್ರಾಳಿಗೆ ಅತೀವ ನೋವು ಕಾಣಿಸಿಕೊಂಡು ರಕ್ತದೊತ್ತಡದಲ್ಲಿ ಏರುಪೇರು ಕಂಡು ಬಂದಿತು. 19ರಂದು ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರತೆಗೆಯಲಾಯಿತು. ಮಗು ಕೆಲ ಹೊತ್ತಿನಲ್ಲೇ ಅಸುನೀಗಿತು. 20ರಂದು ಸುಮಿತ್ರಾ ಅಸ್ವಸ್ಥಗೊಂಡರು. ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಂಬಂಧಿಕರು ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಿದರು. 21ರಂದು ಆಕೆ ಮೃತಪಟ್ಟರು. ಕುಂಬಳಗೋಡು ಠಾಣೆಯಲ್ಲಿ ದೂರು ದಾಖಲಾಗಿದೆ.