ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣದಲ್ಲಿ ಮಂಜು; ಜೆಎನ್‌ಸಿಎಎಸ್‌ಆರ್‌ ಅಧ್ಯಯನ

Last Updated 4 ಫೆಬ್ರುವರಿ 2019, 19:27 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಜು ಮುಸುಕುವ ಕುರಿತ ಅಧ್ಯಯನಕ್ಕೆ ನಿಲ್ದಾಣದ ಆಡಳಿತವು ಜವಾಹರಲಾಲ್‌ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್‌ಆರ್‌) ಜತೆಗೆ ಒಪ್ಪಂದ ಮಾಡಿಕೊಂಡಿದೆ.

ಏನು ಅಧ್ಯಯನ?

‘ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಕೆ.ಆರ್‌.ಶ್ರೀನಿವಾಸ್‌ ನೇತೃತ್ವದ ತಂಡ ವಿಮಾನ ನಿಲ್ದಾಣ ಪ್ರದೇಶದಲ್ಲಿ ಈ ಬಗ್ಗೆ 40 ತಿಂಗಳ ಕಾಲ ಅಧ್ಯಯನ ನಡೆಸಲಿದೆ. ಮಂಜು ಮುಸುಕುವ ಸಮಯ, ವಾತಾವರಣದಲ್ಲಿ ದೂಳಿನ ಕಣಗಳು ಸೇರುವ ಪ್ರಮಾಣ, ಹವಾಮಾನ ಬದಲಾವಣೆ, ತಾಪಮಾನ ಮಾಪನ, ವಿಕಿರಣ ಅಳೆಯುವುದು, ಆಗಸ ಪರಿಶೀಲನೆ (ಟೋಟಲ್‌ ಸ್ಕೈ ಸ್ಕ್ಯಾನರ್‌) ಸಂಬಂಧಿಸಿd ಸೂಕ್ತ ಸಲಕರಣೆಗಳನ್ನು ಅಳವಡಿಸಿ ಅಧ್ಯಯನ ನಡೆಸಲಾಗುವುದು’ ಎಂದು ಸಂಶೋಧನಾ ಕೇಂದ್ರದ ಅಧ್ಯಕ್ಷ ಪ್ರೊ.ನಾಗರಾಜ್‌ ಹೇಳಿದರು.

ಏನು ಪ್ರಯೋಜನ?

‘ಮಂಜು ಮುಸುಕುವ ಸಾಧ್ಯತೆ ಹಾಗೂ ಪ್ರಮಾಣವನ್ನು 4 ರಿಂದ 5 ಗಂಟೆಯ ಮೊದಲೇ ಗ್ರಹಿಸಿ ಸಂಬಂಧಿಸಿದ ವಿಮಾನಯಾನ ಸಂಸ್ಥೆಗಳಿಗೆ ರವಾನಿಸಲಾಗುತ್ತದೆ. ವಿಮಾನ ಸಂಸ್ಥೆಗಳು ಅಗತ್ಯಕ್ಕೆ ತಕ್ಕಂತೆ ತಮ್ಮ ವೇಳಾಪಟ್ಟಿಯನ್ನು ಬದಲಾಯಿಸಬಹುದು. ಪ್ರಯಾಣಿಕರಿಗೂ ಮಾಹಿತಿ ನೀಡಿ ಅವರು ವಿಮಾನ ನಿಲ್ದಾಣದಲ್ಲಿ ಕಾಯುವ ಅವಧಿಯನ್ನು ತಪ್ಪಿಸಬಹುದು. ಮಾರ್ಗ ಬದಲಾವಣೆ ಮಾಡಲೂಬಹುದು’ ಎಂದು ವಿಮಾನ ನಿಲ್ದಾಣದ ಉಪಾಧ್ಯಕ್ಷ ಅರುಣಾಚಲಂ ವಿವರಿಸಿದರು.

‘ವಿಮಾನ ಹಾರಾಟ ವಿಳಂಬ ತಪ್ಪಿಸಬಹುದು. ವಿಮಾನ ಉದ್ಯಮ ಕ್ಷೇತ್ರಕ್ಕಾಗುವ ಆರ್ಥಿಕ ನಷ್ಟ ತಪ್ಪಿಸಬಹುದು. ಈ ವರ್ಷಾಂತ್ಯದಲ್ಲಿ ನಿಲ್ದಾಣದ ಎರಡನೇ ರನ್‌ವೇಯಲ್ಲಿ ವಿಮಾನ ಹಾರಾಟ ನಡೆಯಲಿದೆ. ಈ ರನ್‌ವೇ ಕ್ಯಾಟ್‌ –3 ನಿಯಮಗಳಿಗನುಸಾರವಾಗಿ ಇರಲಿದೆ. ದಟ್ಟ ಮಂಜು ಇರುವ ಸಂದರ್ಭದಲ್ಲಿಯೂ ವಿಮಾನ ಹಾರಾಟಕ್ಕೆ ಅನುಕೂಲವಾಗುವಂತೆ ಬೇಕಾಗುವ ದಿಕ್ಸೂಚಿ ವ್ಯವಸ್ಥೆ ಹೊಂದಿರಲಿದೆ. ಹಾಗಿದ್ದರೂ ದಟ್ಟ ಮಂಜು ವಿಮಾನ ಹಾರಾಟದ ಮೇಲೆ ಪರಿಣಾಮ ಆಗುವ ಸಾಧ್ಯತೆ ಇದೆ. ಆದ್ದರಿಂದ ಕಡಿಮೆ ದೃಶ್ಯ ಸಾಧ್ಯತೆ ಪರಿಸ್ಥಿತಿಯಲ್ಲಿ ವಿಮಾನ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ಈ ವ್ಯವಸ್ಥೆ ಕೆಲಸ ಮಾಡಲಿದೆ. ಮುನ್ಸೂಚನಾ ತಾಂತ್ರಿಕ ವ್ಯವಸ್ಥೆ ಎಲ್ಲ ವಿಮಾನಯಾನ ಸಂಸ್ಥೆಗಳಿಗೂ ಅನುಕೂಲವಾಗಲಿದೆ’ ಬಿಐಎಎಲ್‌ ವ್ಯವಸ್ಥಾಪಕ ನಿರ್ದೇಶಕ ಹರಿ ಮಾರರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT