ಬೆಂಗಳೂರು: ಪಾಲಿಕೆಯ ಛಲವಾದಿಪಾಳ್ಯ ವಾರ್ಡ್ನ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ರೌಡಿ ಸೆಲ್ವರಾಜ್ ಅಲಿಯಾಸ್ ಪೂಬಾಳನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಹತ್ಯೆ ಪ್ರಕರಣದಲ್ಲಿ ಕದಿರೇಶ್ ಅಕ್ಕ ಮಾಲಾ, ಆಕೆಯ ಮಗ ಅರುಳ್ ಸೇರಿ ಏಳು ಮಂದಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅಪರಾಧ ಸಂಚಿನಲ್ಲಿ ಭಾಗಿಯಾಗಿದ್ದ ಹಾಗೂ ಕೃತ್ಯದ ನಂತರ ಆರೋಪಿಗಳು ಪರಾರಿಯಾಗಲು ಸಹಾಯ ಮಾಡಿದ್ದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
‘ವಿವೇಕನಗರ ಠಾಣೆ ರೌಡಿ ಪಟ್ಟಿಯಲ್ಲಿ ಹೆಸರಿರುವ ಸೆಲ್ವರಾಜ್, ಹತ್ಯೆ ಪ್ರಕರಣದ ಆರೋಪಿ ಪೀಟರ್ ಹಾಗೂ ಇತರರಿಗೆ ಸಹಾಯ ಮಾಡಿರುವ ಮಾಹಿತಿ ಸಿಕ್ಕಿದೆ. ಹೀಗಾಗಿ, ಆತನನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.